ಸಮಾಜದಲ್ಲಿ ನಡೆಯುತ್ತಿರುವಂತಹ ಅಪರಾಧ ಪ್ರಕರಣಗಳಲ್ಲಿ ವಿದ್ಯಾವಂತ ಯುವಜನರು ಪಾಲ್ಗೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವಕ ಯುವತಿಯರಿಗೆ ೨೦೧೬-೧೭ ನೇ ಸಾಲಿನ ಜಿಲ್ಲಾ ಮಟ್ಟದ ಯುವಸಮ್ಮೇಳನ ಕಾರ್ಯಾಗಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಯುವಜನರು ಯಾವ ದೇಶದಲ್ಲಿ ಸದೃಢರಾಗುತ್ತಾರೊ ಅಂತಹ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಸರ್ಕಾರದಿಂದ ಯುವಜನರ ಸಬಲೀಕರಣಕ್ಕಾಗಿ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಯುವಜನರು ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾಗುವುದರಿಂದ ಅವರ ಮುಂದಿನ ಸಂಪೂರ್ಣವಾಗಿ ಕಮರಿಹೋಗುತ್ತದೆ.
ಸಮಾಜದಲ್ಲಿನ ಭ್ರಷ್ಠಾಚಾರವನ್ನು ತಡೆಗಟ್ಟಬೇಕಾದರೆ ಯುವಜನರ ಪಾತ್ರ ಎಷ್ಟಿದೆ ಎಂಬುದನ್ನು ಶಿಕ್ಷಣ ಸಂಸ್ಥೆಗಳು ಯುವಜನರಿಗೆ ಮನವರಿಕೆ ಮಾಡಿಕೊಡಬೇಕು. ಯುವಜನರು ದಾರಿ ತಪ್ಪದಂತೆ ನೋಡಿಕೊಳ್ಳಬೇಕಾದಂತಹ ದೊಡ್ಡಹೊಣೆಗಾರಿಕೆ ಪೋಷಕರದ್ದಾಗಿದೆ. ಉತ್ತಮವಾದ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ವಿದ್ಯಾರ್ಥಿಯ ಜೀವನದಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಸಮಯವನ್ನು ಮೀಸಲಿಟ್ಟು ಸಮಾಜಕ್ಕೆ ಉಪಕಾರಿಗಳಾಗಬೇಕು. ಪ್ರತಿಯೊಬ್ಬ ಯುವಜನರು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಚಂದ್ರಾನಾಯಕ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಳ್ಳಲು ಅಗತ್ಯವಾಗಿರುವ ಮೌಲ್ಯಾಧಾರಿತವಾದ ಶಿಕ್ಷಣ ನೀಡುವುದು ಅಗತ್ಯವಿದೆ. ಅವರನ್ನು ಉತ್ತಮ ಬದುಕಿನೆಡೆಗೆ ಕರೆದೊಯ್ಯಬೇಕಿದೆ. ಈ ಬಗ್ಗೆ ಚರ್ಚೆಗಳು ನಡೆಯಬೇಕು. ಸಭೆಗಳು ಆಯೋಜನೆ ಮಾಡಬೇಕು. ಇಂದಿನ ಶಿಕ್ಷಣ ವ್ಯವಸ್ಥೆಗಳಲ್ಲಿನ ಲೋಪದೋಷಗಳಿಂದಾಗಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಭ್ರಷ್ಟಾಚಾರ ಮುಕ್ತ ರಾಷ್ಟ್ರನಿರ್ಮಾಣಕ್ಕೆ ಯುವಜನರು ಮುಂದಾಗಬೇಕು. ವಾಸ್ತವತೆಯ ನೆಲೆಗಟ್ಟಿನಲ್ಲಿ ದೇಶವನ್ನು ಕಟ್ಟುವಂತಹ ಪ್ರಾಮಾಣಿಕ ಪ್ರಯತ್ನ ಯುವಜನರಲ್ಲಿ ಹುಟ್ಟಬೇಕು ಎಂದರು.
ಯುವಜನರ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ, ಸಂಪನ್ಮೂಲ ವ್ಯಕ್ತಿ ಚನ್ನಕೃಷ್ಣಪ್ಪ, ತರಬೇತುದಾರ ಮುಸ್ತಾಕ್ ಅಹ್ಮದ್, ಸೋ.ಸು.ನಾಗೇಂದ್ರನಾಥ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -