ಗ್ರಾಮೀಣ ಭಾಗದಲ್ಲಿನ ರೈತರ ಜೀವನಾಡಿಯಾಗಿರುವ ಹೈನುಗಾರಿಕೆ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆಯ ಕ್ಷೇತ್ರಾಭಿವೃದ್ಧಿ ಅಧಿಕಾರಿ ಮೋಹನ್ ತಿಳಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ₨ 60 ಸಾವಿರ ನೀಡಿ ಅವರು ಮಾತನಾಡಿದರು.
ಧರ್ಮಸ್ಥಳದ ದೇವಾಲಯಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಬರುತ್ತಿರುವ ಲಕ್ಷಾಂತರ ಮಂದಿ ಭಕ್ತರು ನೀಡುವಂತಹ ಕಾಣಿಕೆಗಳನ್ನು ಕ್ರೋಡೀಕರಿಸಿ ಗ್ರಾಮಾಂತರ ಪ್ರದೇಶಗಳಲ್ಲಿನ ರೈತರಿಗಾಗಿ ಉಪಯೋಗ ಮಾಡುವಂತಹ ಕಾರ್ಯವನ್ನು ಡಾ.ವಿರೇಂದ್ರಹೆಗಡೆಯವರು ಮಾಡುತ್ತಿದ್ದಾರೆ. ಮೊದಲ ಕಂತಾಗಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₨ 60 ಸಾವಿರ ಬಿಡುಗಡೆ ಮಾಡಿದ್ದಾರೆ. ಎರಡನೇ ಕಂತು ₨ 40 ಸಾವಿರ ಬಿಡುಗಡೆಯಾಗಲಿದೆ. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಂಘಗಳ ಮೂಲಕ ದೇವಾಲಯಗಳು, ಮಸೀದಿಗಳು, ಚರ್ಚ್ ಗಳ ಸ್ವಚ್ಚತಾ ಕಾರ್ಯವನ್ನು ಮಾಡಲಾಗುತ್ತಿದ್ದು, ಶೈಕ್ಷಣಿಕ ಅಭಿವೃದ್ಧಿಗಾಗಿಯೂ ಸಹಕಾರ ನೀಡಲಾಗುತ್ತಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ಸಹಕಾರಿ ಸಂಘಗಳು ಅಭಿವೃದ್ಧಿಯತ್ತ ಸಾಗಿದಾಗ ಹಳ್ಳಿಗಳಲ್ಲಿನ ಜನರು ಜೀವನ ಮಟ್ಟ ಸುಧಾರಣೆಯಾಗುತ್ತದೆ. ಪ್ರತಿಯೊಬ್ಬರು ಇಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಮಾತನಾಡಿ, ಮಹಿಳೆಯರು ಸಬಲರಾಗಲು ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಟ್ಟಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘವು ಸ್ವಚ್ಚತೆ, ಕೌಶಲ್ಯಾಭಿವೃದ್ಧಿಗೂ ಹೆಚ್ಚು ಒತ್ತು ನೀಡುತ್ತಿದ್ದು, ಜನರ ಸಹಕಾರ, ತೊಡಗಿಸಿಕೊಳ್ಳುವಿಕೆ ಅಗತ್ಯವಿದೆ ಎಂದರು.
ಮುಖಂಡರಾದ ನಿರ್ದೇಶಕರಾದ ಎಂ.ಡಿ.ನರಸಿಂಹಮೂರ್ತಿ, ನಾರಾಯಣಪ್ಪ, ಮಹೇಶ್ ಕುಮಾರ್, ದೇವರಾಜಪ್ಪ, ರೇವಣ್ಣಸಿದ್ದಯ್ಯ, ನಂಜಪ್ಪ, ದ್ಯಾವಮ್ಮ, ಭಾಗ್ಯಮ್ಮ, ರಾಮರೆಡ್ಡಿ, ಮರಿಯಪ್ಪ, ಕಾರ್ಯದರ್ಶಿ ಸುಭ್ರಮಣಿ, ಧರ್ಮಸ್ಥಳ ಸಂಸ್ಥೆಯ ಅಧಿಕಾರಿ ಲಕ್ಷ್ಮೀ ಹಾಜರಿದ್ದರು.
- Advertisement -
- Advertisement -
- Advertisement -
- Advertisement -