ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸುಮಾರು ೫ ಕೋಟಿ ರೂ ನಷ್ಟದಲ್ಲಿ ನಡೆಯುತ್ತಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಸಿ.ಎಂ.ಗೋಪಾಲ್ ತಿಳಿಸಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಯ ಬಳಿ ಇರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ೨೦೧೬-೧೭ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಅಭಿವೃದ್ದಿಯಾಗಬೇಕಾದರೆ ರೈತರು ತೆಗೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಕಟ್ಟಿದಾಗ ಮಾತ್ರ ಸಾಧ್ಯ. ಬ್ಯಾಂಕ್ ನಷ್ಟದಲ್ಲಿ ನಡೆಯುತ್ತಿದ್ದು ಅದಕ್ಕೆ ಕಾರಣ ರೈತರು ತಾವು ಪಡೆದ ಸಾಲಗಳನ್ನು ಸರಿಯಾದ ಸಮಯಕ್ಕೆ ಕಟ್ಟದೆ ಇರುವುದು. ನರ್ಬಾಡ್ ೧೪% ಬಡ್ಡಿ ವಿಧಿಸುತ್ತಿದ್ದು, ಸರ್ಕಾರ ೧೧% ಬಡ್ಡಿ ಪಾವತಿ ಮಾಡುತ್ತಿದ್ದು, ರೈತರು ೩% ಬಡ್ಡಿ ಮಾತ್ರ ಕಟ್ಟಬೇಕಾಗಿದೆ. ಅದನ್ನು ಸಹ ರೈತರು ಸಕಾಲಕ್ಕೆ ಪಾವತಿ ಮಾಡದೆ ಇರುವುದು ವಿಷಾದನೀಯ ಎಂದು ತಿಳಿಸಿದರು.
೨೦೧೬-೧೭ನೇ ಸಾಲಿನಲ್ಲಿ ಶೇಕಡಾ ೫೧.೪೧% ರಷ್ಟು ಸಾಲ ವಸೂಲಾಗಿದ್ದು, ರೈತರಿಗೆ ಎಷ್ಷೇ ಮನವಿ ಮಾಡಿದರೂ ಸಾಲ ಮರುಪಾವತಿ ಮಾಡುತ್ತಿಲ್ಲ, ಇದಕ್ಕೆ ಕಾರಣ ಸರ್ಕಾರ ಅಲ್ಪಾವಧಿ ಸಾಲವನ್ನು ೫೦,೦೦೦ ರೂವರೆಗೆ ಮನ್ನಾ ಮಾಡಿದ್ದು, ಉಳಿದ ಎಲ್ಲಾ ಸಾಲಗಳನ್ನು ಮನ್ನಾ ಮಾಡಬಹುದೆಂಬ ಊಹಾಪೋಹದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಆಗುತ್ತಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಾರಂಭವಾಗಿ ೭೯ ವರ್ಷಗಳು ಕಳೆದಿದ್ದು ಸುದೀರ್ಘ ಇತಿಹಾಸ ಹೊಂದಿರುವ ಈ ಬ್ಯಾಂಕ್ ನಷ್ಟದಲ್ಲಿ ನಡೆಯುತ್ತಿದೆ. ಹೀಗೆ ನಡೆದರೆ ಮುಚ್ಚುವ ಪ್ರಮೇಯ ಸಹ ಬರಬಹುದು, ರೈತರು ಅದಕ್ಕೆ ಅವಕಾಶ ಕೊಡದೆ ತೆಗೆದುಕೊಂಡ ಸಾಲ ಮರುಪಾವತಿ ಮಾಡಿ ಬೇರೆಯವರಿಗೆ ಸಾಲ ನೀಡಲು ಸಹಾಯ ಮಾಡಿ. ಶೇ ೫೧% ಸಾಲ ವಸೂಲಾತಿಯಿಂದ ಬೇರೆಯವರಿಗೆ ಸಾಲ ನೀಡಲು ಸಾದ್ಯವಾಗದ ಪರಿಸ್ಥಿತಿಯಲ್ಲಿ ಬ್ಯಾಂಕ್ ಇದೆ. ಸರ್ಕಾರ ಸುಮಾರು ೧೧% ಬಡ್ಡಿಯನ್ನು ನೀಡುತ್ತಿದ್ದು, ಉಳಿದ ಸಾಲ ಮತ್ತು ಬಡ್ಡಿ ರೈತರೇ ಪಾವತಿ ಮಾಡಬೇಕು, ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎನ್ನುವುದು ಊಹಾಪೋಹವಾಗಿದ್ದು, ಸಾಲ ಪಡೆದವರು ಸಾಲ ಮರುಪಾವತಿ ಮಾಡಿ ಎಂದು ತಿಳಿಸಿದರು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ೨೦೧೬-೧೭ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಕೇವಲ ನಿರ್ದೆಶಕರು ಮಾತ್ರ ಭಾಗವಹಿಸಿದ್ದು, ಸದಸ್ಯರು ಇಲ್ಲದೆ ಖಾಲಿ ಖುರ್ಚಿಗಳು ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ನಿರ್ದೇಶಕರಾದ ಎಂ.ಪಿ.ರವಿ, ಅಶ್ವತ್ತನಾರಾಯಣರೆಡ್ಡಿ, ಆರ್,ಬಿ ಜಯದೇವ್, ಶಂಕರ್, ಶಿವಾರೆಡ್ಡಿ, ಭೀಮೇಶ್, ಸಿದ್ದಪ್ಪ, ಶ್ರೀಮತಿ ಭಾಗ್ಯಮ್ಮ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







