Sidlaghatta : BJP ವತಿಯಿಂದ ಶಿಡ್ಲಘಟ್ಟ ಮಂಡಲ ವ್ಯಾಪ್ತಿಯಲ್ಲಿ ಜನವರಿ 21 ರಿಂದ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನ ಆಯೋಜಿಸಲಾಗಿದೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.
ಶಿಡ್ಲಘಟ್ಟ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ವಿಜಯ ಸಂಕಲ್ಪ ಅಭಿಯಾನದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜನವರಿ 21ರಂದು ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್ ಅವರ ಮನೆಯಲ್ಲಿ ವೀಕ್ಷಕರ ಸಮ್ಮುಖದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಪ್ರತಿಯೊಂದು ಬೂತ್ಗಳಲ್ಲಿ ಕರಪತ್ರ ಹಂಚುವುದು, ಗೋಡೆಗಳಲ್ಲಿ ಬಿಜೆಪಿ ಸಾಧನೆ ಬಿಂಬಿಸುವ ಪೈಟಿಂಗ್, ವಾಹನಗಳ ಸ್ಟಿಕ್ಕರ್ ಅಂಟಿಸುವುದು, ಸದಸ್ಯತ್ವ ಅಭಿಯಾನ ಇತ್ಯಾದಿ ಕಾರ್ಯ ನಡೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರ ಸೇವೆ-ಸಾಧನೆ ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಜನಸಾಮಾನ್ಯರಿಗೆ ದೊರಕುವ ಸೌಲಭ್ಯಗಳು – ಇತ್ಯಾದಿಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.
ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಇನ್ನು ತೊಂಬತ್ತು ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕ್ಷೇತ್ರದ 205 ಬೂತ್ ಕಮಿಟಿ ಮಾಡಿದ್ದೇವೆ. ಪ್ರತಿಯೊಂದು ಬೂತ್ ನಲ್ಲೂ ಕನಿಷ್ಠ ಮುನ್ನೂರು ಸದಸ್ಯತ್ವ ಮಾಡಿಸುವ ಗುರಿ ಹೊಂದಿದ್ದೇವೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲು ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಜ.21ರಿಂದ ಅಭಿಯಾನ ಆರಂಭ ಆಗಲಿದ್ದು, ಅದಕ್ಕಾಗಿ ಈಗಾಗಲೇ ವ್ಯವಸ್ಥಿತವಾಗಿ ಪೂರ್ವಭಾವಿ ಸಿದ್ಧತೆ ನಡೆದಿವೆ. ಪಕ್ಷವು ತಳಹಂತದಿಂದ ಪಕ್ಷದ ಸದೃಢೀಕರಣ ಸೇರಿ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಸರ್ಕಾರದ ಸಾಧನೆ ಹಾಗೂ ಜನ ಕಲ್ಯಾಣದಡಗೆ ಬಿಜೆಪಿಯ ಬದ್ಧತೆ ಸಾರಲು ಪ್ರತಿ ಬೂತ್ನಲ್ಲಿ ರಾಜ ಮತ್ತು ಕೇಂದ್ರ ಸರ್ಕಾರದ ಸಾಧನೆ ಸಾರುವ ಮತ್ತು ಯೋಜನೆಗಳ ಮಾಹಿತಿ ನೀಡುವ ಗೋಡೆ ಪೇಟಿಂಗ್ಗಳನ್ನು ಮಾಡಿಸಲಾಗುವುದು. ಸಾಮಾಜಿಕ ಜಾಲಾತಾಣಗಳ ಮೂಲಕವೂ ನಮ್ಮ ಯೋಜನೆಗಳ ಯಶಸ್ಸನ್ನು ಸಾರಲಾಗುವುದು ಎಂದರು.
ಸದಸ್ಯತ್ವ ಅಭಿಯಾನ ಸಂಪೂರ್ಣ ಆನ್ಲೈನ್ ಇರಲಿದ್ದು ಮಿಸ್ ಕಾಲ್ ಮೂಲಕ ನೋಂದಣಿಯಾದ ಸದಸ್ಯರ ಸಂಖ್ಯೆಯನ್ನು ವೆಬ್ಸೈಟ್ನಲ್ಲಿ ನೇರವಾಗಿ ನೋಡಬಹುದು. ನೋಂದಣಿ ಪ್ರಕ್ರಿಯೆ ಬಗೆಗೂ ಕಾರ್ಯಕರ್ತರಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಪಕ್ಷದ ಕನಕಪ್ರಸಾದ್, ಧನಂಜಯ, ಮುಖೇಶ್, ದೇವರಾಜ್, ನಟರಾಜ್, ದೊಣ್ಣಹಳ್ಳಿ ರಾಮಣ್ಣ, ಅಶ್ವತ್ಥಪ್ಪ ಉಪಸ್ಥಿತರಿದ್ದರು.