ನೀರು ನಮ್ಮ ಅಮೂಲ್ಯ ಸಂಪತ್ತು, ಅದನ್ನು ಮಿತವಾಗಿ ಬಳಸಿ, ನೀರು ನಾವು ಸೃಷ್ಟಿ ಮಾಡುವ ವಸ್ತುವಲ್ಲ, ಆದ್ದರಿಂದ ಅಂತಹ ಜೀವಜಲವನ್ನು ಹಿತಮಿತವಾಗಿ ಬಳಸುವುದು ಒಳಿತು ಎಂದು ಜೆ.ಎಂ.ಎಫ್.ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಎನ್.ಎ. ಶ್ರೀಕಂಠ ತಿಳಿಸಿದರು.
ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ‘ಅಂತಾರಾಷ್ಟ್ರೀಯ ನೀರಿನ ದಿನಾಚರಣೆ’ಯ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಯೊಂದಿಗೆ ಆಯೋಜಿಸಲಾದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೀರಿನ ಅಭಾವದ ಅನುಭವವಿದ್ದೂ ಅದರ ಬಗ್ಗೆ ಎಚ್ಚರ ವಹಿಸದಿರುವುದು ತಪ್ಪಾಗುತ್ತದೆ. ನಮ್ಮ ದಿನನಿತ್ಯದ ಬಳಕೆಯಲ್ಲಿ ಅರಿವಿಲ್ಲದೇ ನೀರು ಪೋಲು ಮಾಡುತ್ತಿರುವುದು ಇನ್ನಾದರೂ ನಾವು ಗಮನಿಸಬೇಕಿದೆ. ಒಂದು ಕಡೆ ನೀರು ಸಿಗದೆ ಬರಗಾಲವೆಂದು ಒದ್ದಾಡುತ್ತಿದ್ದರೆ, ಮತ್ತೊಂದೆಡೆ ಬೇಕಾದಷ್ಟು ನೀರಿದೆಯೆಂದು ಬೇಕಾಬಿಟ್ಟಿ ಉಪಯೋಗಿಸುತ್ತಿದ್ದಾರೆ. ಈ ಅಂತರವನ್ನು ಆದಷ್ಟು ಬೇಗ ಹೋಗಲಾಡಿಸಬೇಕಾಗಿದೆ. ನಮ್ಮನ್ನು ನಾವು ತಿದ್ದಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ‘ಸಾಮಾಜಿಕವಾಗಿರಲಿ, ರಾಜಕೀಯವಾಗಿರಲಿ ಎಲ್ಲಾ ವ್ಯವಸ್ಥೆಗಳ ಆಧಾರಗಳು ಮನುಷ್ಯರ ಒಳ್ಳೆಯತನದ ಮೇಲೆ ನಿಂತಿರುತ್ತದೆ. ಯಾವುದೇ ರಾಷ್ಟ್ರವು ಅದರ ಪ್ರಜೆಗಳಿಂದಾಗಿ, ಅವರ ಚಿಂತನೆಗಳಿಂದಾಗಿ ಮಹತ್ತರವಾದುದು ಹಾಗು ಉತ್ತಮವಾದುದೆನಿಸುತ್ತದೆ’ ಎಂಬ ಅಬ್ದುಲ್ ಕಲಾಂರ ಚಿಂತನೆಯ ಮಾತು ನಮಗೆ ದಾರಿದೀಪವಾಗಲಿ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಬೇಕು. ಮುಂದೆ ಜೀವನದಲ್ಲಿ ಪ್ರತಿ ಹೆಜ್ಜೆಗೂ ವಿವಿಧ ಪರೀಕ್ಷೆಗಳು ಎದುರಾಗುತ್ತವೆ. ಧೈರ್ಯವಾಗಿರಿ. ಗುರಿಯಿರಲಿ, ಗುರುವಿನ ಬಗ್ಗೆ ಗೌರವವಿರಲಿ ಎಂದು ಹೇಳಿದರು.
ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೊಹಮ್ಮದ್ ತಮೀಮ್ ಅನ್ಸಾರಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ವಕೀಲರಾದ ಬೈರಾರೆಡ್ಡಿ, ನಾಗೇಂದ್ರಬಾಬು, ಮಂಜುನಾಥ್, ಲೋಕೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -