ಮನುಷ್ಯನ ತಪ್ಪುಗಳನ್ನು ನಿಸರ್ಗ ಸರಿಪಡಿಸಲು ಸಾಧ್ಯವಿಲ್ಲ. ನಮ್ಮ ಭೂಮಿಯನ್ನು ಸತ್ವಯುತಗೊಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕಾರ್ಯತತ್ಪರರಾಗಬೇಕು. ಕಸಮುಕ್ತ, ಹಸಿರುಕ್ಕುವ ಪರಿಸರವನ್ನು ಸೃಷ್ಟಿಸಲು ಪ್ರಯತ್ನಿಸಬೇಕು ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ತಿಳಿಸಿದರು.
ನಗರದ ಹನುಮಂತಪುರ ಗೇಟ್ ಬಳಿಯಿರುವ ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ಭಾನುವಾರ ತಾಲ್ಲೂಕು ಕ.ಸಾಪ ಬಿ.ಜಿ.ಎಸ್ ಪಬ್ಲಿಕ್ ಸ್ಕೂಲ್, ಪಿ.ಯು ಕಾಲೇಜ್ ಮತ್ತು ದಿ ಕ್ರೆಸೆಂಟ್ ಸ್ಕೂಲ್ ಸಹಯೋಗದಲ್ಲಿ ನಡೆಸಲಾದ ‘ಸಾಧಕರ ಸಾಧನೆ – ವಿದ್ಯಾರ್ಥಿಗಳಿಗೆ ಪ್ರೇರಣೆ’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.
ಒಣ ಪ್ರಳಯ, ಘನ ಪ್ರಳಯ, ಜಲ ಪ್ರಳಯ, ಹೊಗೆ ಪ್ರಳಯ, ಅಗ್ನಿ ಪ್ರಳಯ, ಧೂಳು ಪ್ರಳಯ, ಕಸ ಪ್ರಳಯ ಭೂಮಿಯನ್ನು ಬಾಧಿಸುತ್ತಿದೆ. ಅದನ್ನು ಕಡಿಮೆ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಎಲ್ಲೆಡೆ ಆಲೋಚನೆಗಳು ಬರಬೇಕಿವೆ. ಭವಿಷ್ಯದ ಇಂಧನ ಮೂಲಗಳಾದ ಸೂರ್ಯ, ಗಾಳಿ, ಸಸ್ಯ, ಸಮುದ್ರದ ಅಲೆಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯುತ್ತಿದ್ದು, ಅದರಿಂದ ಭೂಮಿಯನ್ನು ಆದಷ್ಟು ಉಳಿಸಿಕೊಳ್ಳಬೇಕು. ಕಸದ ಬಗ್ಗೆ ನಾವು ಜವಾಬ್ದಾರಿಯುತರಾಗದಿದ್ದಲ್ಲಿ ನಮ್ಮ ಮಣ್ಣು, ಗಾಳಿ ಭವಿಷ್ಯಕ್ಕೆ ಶುದ್ಧ ರೂಪದಲ್ಲಿ ಉಳಿಯದು ಎಂದು ವಿವಿಧ ಚಿತ್ರ ಹಾಗೂ ವೀಡಿಯೋ ಮೂಲಕ ವಿವರಿಸಿದರು.
ಪರಿಸರ ವಿಜ್ಞಾನಿ ಹರೀಶ ಆರ್ ಭಟ್, ‘ಪ್ರಕೃತಿಯ ವಿಸ್ಮಯಗಳು’ ಎಂಬ ವಿಷಯದ ಬಗ್ಗೆ ಚಿತ್ರಗಳನ್ನು ತೋರಿಸುತ್ತಾ ಮಾತನಾಡಿ, ಇರುವೆಯ ಮಿದುಳಿನ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಸೊಳ್ಳೆಯಿಂದ ಸೂಜಿಯನ್ನು, ಮುಳ್ಳುಹಂದಿಯಿಂದ ಶಸ್ತ್ರಚಿಕಿತ್ಸೆಗೆ ಬಳಸುವ ಸೂಜಿಯನ್ನು, ತಾವರೆ ಎಲೆಯಿಂದ ತೆಪ್ಪವನ್ನು, ಜೇನು ಗೂಡಿನಿಂದ ಟೈರ್ ಮತ್ತು ಶೀಥಲೀಕರಣ ಘಟಕ, ಗೂಬೆಯಿಂದ ಶಬ್ಧವಿಲ್ಲದ ಫ್ಯಾನ್, ಜೇಡನಿಂದ ಗುಂಡು ನಿರೋಧಕ ಜಾಕೆಟ್, ಆಕ್ಟೋಪಸ್ ನಿಂದ ಜೆಸಿಬಿ, ಹೀಗೆ ಪ್ರಕೃತಿಯ ವಿಸ್ಮಯಗಳಿಂದ ಮಾನವ ಕಲಿಯುತ್ತಲೇ ಬಂದಿದ್ದಾನೆ. ಸೂಜಿಯ ಮೊನೆಯಷ್ಟು ಚಿಕ್ಕದಾದ ಇರುವೆಯ ಮಿದುಳು ಎಂಟು ಕಂಪ್ಯೂಟರ್ಗಳಿಗೆ ಸಮನಾಗಿದೆ ಎಂದು ವಿವರಿಸಿದರು.
ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕೊತ್ತನೂರು ಸ್ನೇಕ್ ನಾಗರಾಜ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗಾನವಿ ಮತ್ತು ತಂಡದವರು ಪರಿಸರ ಗೀತೆಗಳನ್ನು ಹಾಡಿದರು. ಕೋಲಾರ ರವಿಕುಮಾರ ನೀರಿನ ಬಗ್ಗೆ ಗೀತೆಗಳನ್ನು ಹಾಡಿದರು. ಬಿ.ಜಿ.ಎಸ್ ಶಾಲೆಯ ವಿದ್ಯಾರ್ಥಿಗಳು ರಚಿಸಿದ್ದ ವೈಜ್ಞಾನಿಕ ಚಿತ್ರಣಗಳನ್ನು ಪ್ರದರ್ಶಿಸಿಡಲಾಗಿತ್ತು. ಕ.ಸಾ.ಪ ಗೆ 15 ಸಾವಿರ ರೂಗಳ ದತ್ತಿ ಹಣವನ್ನು ನೀಡಿದ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅನ್ಯಗ್ರಹ ಜೀವಿಗಳು, ಬ್ಯಾಕ್ಟೀರಿಯಾ, ರೋಬೋಟ್, ಪ್ಲಾಸ್ಟಿಕ್ ಬಳಕೆ ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನಾಗೇಶ ಹೆಗಡೆ ಮತ್ತು ಹರೀಶ ಆರ್ ಭಟ್ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟರು. ಬಿ.ಜಿ.ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿಗಳಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಬಾಟಲ್ಗಳನ್ನು ನೀಡಲಾಯಿತು.
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಅನಂತಕೃಷ್ಣ, ಬಿ.ಜಿ.ಎಸ್ ಸಂಸ್ಥೆಯ ಪ್ರಾಂಶುಪಾಲ ಮಹದೇವಯ್ಯ, ತಾಲ್ಲೂಕು ಕ.ಸಾ.ಪ ಉಪಾಧ್ಯಕ್ಷ ಸಿ.ಪಿ.ಈ ಕರಗಪ್ಪ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಎಸ್.ಸತೀಶ್, ಎಸ್.ವಿ.ನಾಗರಾಜರಾವ್, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ, ಕಲಾಧರ್, ಶಶಿಕುಮಾರ್ , ಬಿ.ಜಿ.ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -