ಮೌಢ್ಯಾಚರಣೆ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಮಳ್ಳೂರು ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಉಪಹಾರವನ್ನು ಏರ್ಪಡಿಸಿರುವುದಾಗಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಯ್ಯ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಈ ಹಿಂದೆ ಮೌಢ್ಯಾಚರಣೆಗಳನ್ನು ನಿಷೇಧಿಸಬೇಕೆಂಬ ಕಾನೂನು ತರಲು ಪ್ರಯತ್ನಿಸಿತ್ತು. ಈ ಕಾಯ್ದೆಯನ್ನು ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಹಂತದಲ್ಲಿ ಕೆಲವು ಮೂಲಭೂತವಾದಿ, ಪಟ್ಟಭದ್ರ ಹಿತಾಸಕ್ತಿಗಳು ಈ ಮಸೂದೆಯ ಬಗ್ಗೆ ದೊಡ್ಡ ವಿವಾದ ಎಬ್ಬಿಸಿದ್ದರಿಂದಾಗಿ ಸರ್ಕಾರ ಮೌನವಹಿಸಿತು. ಮೌಢ್ಯಾಚರಣೆ ನಿಷೇಧಿಸುವ ಮಸೂದೆಯು ಯಾವ ಜಾತಿ ಶರ್ಮದ ವಿರುದ್ಧವೂ ಅಲ್ಲ. ಕೆಲ ದುಷ್ಟಾಚಾರಗಳನ್ನು ನಿಷೇದಿಸುವುದೇ ಈ ಮಸೂದೆಯ ಗುರಿ. ಈ ಕಂದಾಚಾರಗಳನ್ನು ಹಾಗೂ ಸಮಾಜದಲ್ಲಿನ ಮೌಢ್ಯವನ್ನು ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಮನುಷ್ಯ ಮನುಷ್ಯರ ನಡುವೆ ತಾರತಮ್ಯ ಸೃಷ್ಟಿಸುವ, ಸ್ತ್ರೀಯರು ಮಕ್ಕಳ ಹಿಂಸೆಗೆ ಕಾರಣವಾಗುವ ಆಚರಣೆಗಳು ನಮ್ಮ ಸಮಾಜದಲ್ಲಿ ರೂಢಿಯಲ್ಲಿವೆ. ಅವೆಲ್ಲವನ್ನೂ ನಿಲ್ಲಿಸಬೇಕು. ಸ್ಮಶಾನದಲ್ಲಿ ಅಡುಗೆಯನ್ನು ಮಾಡಿ ಸೇವಿಸುವ ಮುಲಕ ಮೌಢ್ಯಾಚರಣೆಗಳಿಲ್ಲದ, ಕಂದಾಚಾರಗಳಿಲ್ಲ, ಜಾತಿಬೇಧವಿಲ್ಲದ, ಸಮ–ಸಮಾಜದ ಕನಸು ನನಸಾಗಬೇಕಿದೆ. ಪರಿವರ್ತನೆಯ ಕಡೆಗೆ ನಮ್ಮ ನಡಿಗೆಯಾಗಬಹುದಾದ ಈ ಕಾರ್ಯಕ್ರಮದಲ್ಲಿ ಪ್ರಗತಿಪರರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಟಿ.ಎ.ಚಲಪತಿ, ಸಿ.ಎಂ.ಲಕ್ಷ್ಮೀನಾರಾಯಣ, ಡಿ.ಎಂ.ವೆಂಕಟೇಶ್, ಹುಜಗೂರು ವೆಂಕಟೇಶ್, ಮುತ್ತೂರು ಲಕ್ಷ್ಮಣ್, ದೊಡ್ಡ ತಿರುಮಳಯ್ಯ, ಮಟ್ಟಿ ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -