Chikkadasarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದ ಶ್ರೀ ಬ್ಯಾಟರಾಯಸ್ವಾಮಿ ಗುಟ್ಟದಲ್ಲಿ ಸಾವಯುವ ಸಂತೆ ವಿಜಯಪುರ, ಮಾತೃ ಮಡಿಲು ಸೇವಾ ಸಂಸ್ಥೆ, ಆಸ್ವಾದಂ ಆತ್ಮಜ್ಯೋತಿ ಸ್ವಾಧ್ಯಾಯ ಮಿಷನ್ ಹಾಗೂ ವಿಶೇಷ ಚೇತನ ಮಕ್ಕಳ ಚಂದನವನ ಇಕೋ ಕ್ಲಬ್ ಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಬ್ಯಾಟರಾಯಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಗೋಪೂಜೆ ನೆರವೇರಿಸುವ ಮೂಲಕ ಪ್ರಕೃತಿ ಮತ್ತು ಪ್ರಾಣಿ ಸಂಕುಲದ ರಕ್ಷಣೆಯ ಸಂಕಲ್ಪ ಮಾಡಲಾಯಿತು.
500ಕ್ಕೂ ಹೆಚ್ಚು ಉಂಡೆ ಬೀಜಗಳ ಬಿತ್ತನೆ: ದೇವಾಲಯದ ಸುತ್ತಮುತ್ತಲಿನ ಗುಡ್ಡದ ಪ್ರದೇಶದಲ್ಲಿ ಹಸಿರನ್ನು ವೃದ್ಧಿಸುವ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳ ಸ್ವಯಂ ಸೇವಕರು ಒಟ್ಟಾಗಿ 500ಕ್ಕೂ ಹೆಚ್ಚು ಉಂಡೆ ಬೀಜಗಳನ್ನು ಬಿತ್ತಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಜಯಪುರ ದಿನೇಶ್ ಅವರು, ಪರಿಸರ ಸಮತೋಲನದಲ್ಲಿ ಬಿತ್ತನೆ ಬೀಜಗಳ ಪಾತ್ರ ಹಾಗೂ ಉಂಡೆ ಬೀಜಗಳನ್ನು ತಯಾರಿಸಿ ಬಿತ್ತುವ ವಿಧಾನದ ಬಗ್ಗೆ ಸಾರ್ವಜನಿಕರಿಗೆ ಮತ್ತು ಸ್ವಯಂ ಸೇವಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಕೃಷಿಕ ರಮೇಶ್ ಮಾತನಾಡಿ, ನಾವು ಸಾವಯವ ಕೃಷಿ ಮಾಡುತ್ತಿದ್ದು , ನಮ್ಮ ತೋಟದಲ್ಲಿ 185 ಕ್ಕೂ ಹೆಚ್ಚಿನ ಹಣ್ಣಿನ ಗಿಡಗಳನ್ನು ಬೆಳೆಯುತ್ತಿದೇನೆ. ಯೋಗ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತರಾಗಿ ಬಂದು ಇಲ್ಲಿ ಬಂದು ಬೀಜ ಉಂಡೆಗಳನ್ನು ನೆಡುತ್ತಿದ್ದೇವೆ ಎಂದು ತಿಳಿಸಿದರು.
ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ ಮಾತನಾಡಿ, ನಮ್ಮ ಸಮಾಜಕ್ಕೆ ಒಳ್ಳೆಯ ಆಹಾರ ನೀಡುವ ಉದ್ದೇಶದಿಂದ ನಾವು ಸಾವಯವ ಕೃಷಿ ಸಂತೆಯನ್ನು ನಡೆಸಿಕೊಂಡು ಬರುತ್ತಿದ್ದು ಇದರಲ್ಲಿ ಸಾವಯವ ಗೊಬ್ಬರ ಬಳಸಿ ಬೆಳೆದಂತಹ ಹಣ್ಣು ತರಕಾರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸಾವಯವ ಹಣ್ಣು ತರಕಾರಿಗಳನ್ನು ನೀಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದಂತಹ ಹಣ್ಣು ಸೊಪ್ಪು ತರಕಾರಿಗಳಿಂದಲೇ ಅಡುಗೆಯನ್ನು ತಯಾರಿಸಿ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರಿಗೆ ಉಣಬಡಿಸಲಾಯಿತು. ಗಿಡಗಳನ್ನು ಬೆಳೆಸಿ ಪರಿಸರ ಉಳಿಸುವ ಶಪಥ ಮಾಡಿದರು. ಯೋಗ ಮತ್ತು ಪರಿಸರ ದಿನದ ಸಮ್ಮಿಲನವಾಗಿ ಮೂಡಿಬಂದ ಈ ಕಾರ್ಯಕ್ರಮ ವಿಶೇಷವಾಗಿತ್ತು.
ಬ್ಯಾಟರಾಯಸ್ವಾಮಿ ದೇವಾಲಯ ಕಮಿಟಿ ಅಧ್ಯಕ್ಷ ಬ್ಯಾಟರಾಯ ಶೆಟ್ಟಿ , ರಜನಿ, ಸಾವಯವ ರೈತರಾದ ವಿಜಯಪುರ ದಿನೇಶ್, ರಮೇಶ್, ಬಸವರಾಜ್, ಆವತಿ ಅನಿಲ್, ವೆಂಕಟೇಶ್, ಬೋದಗೂರು ವೆಂಕಟಸ್ವಾಮಿ ರೆಡ್ಡಿ, ಧರ್ಮಪುರ ವೀರಭದ್ರಪ್ಪ, ನಾರಾಯಣ ಸ್ವಾಮಿ, ಹಾರೋಹಳ್ಳಿ ಕೃಷ್ಣ ಮೂರ್ತಿ , ನಡಿಪಿನಾಯಕನಹಳ್ಳಿ ಶ್ರೀಧರ್, ನಕ್ಕನಹಳ್ಳಿ ಪ್ರಸಾದ್, ಅಂಗಟ ನರಸಾರೆಡ್ಡಿ, ಮಾತೃ ಮಡಿಲು ಸಂಸ್ಥೆ ಜಗದೀಶ್, ವಂದನ ಜಗದೀಶ್, ಚೆನ್ನಕೇಶವ, ಪರಿಸರ ಪ್ರೇಮಿಗಳು ಹಾಜರಿದ್ದರು.








