Sidlaghatta : ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನವು ಶಿಕ್ಷಕ ದಿನಾಚರಣೆಯ ಅಂಗವಾಗಿ ಕೊಡಮಾಡುವ ಪ್ರಸಕ್ತ ಸಾಲಿನ “ಮಕ್ಕಳ ಸ್ನೇಹಿ ಶಿಕ್ಷಕ” ರಾಜ್ಯ ಮಟ್ಟದ ಪ್ರಶಸ್ತಿಗೆ ಶಿಡ್ಲಘಟ್ಟದ ಎಸ್. ಕಲಾಧರ್ ಆಯ್ಕೆಯಾಗಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ, ಪ್ರಶಸ್ತಿ ₹5000 ನಗದು, ಫಲಕ, ಫಲ-ಪುಷ್ಪ ಹೊಂದಿದೆ. ಸೆ. 7 ರಂದು ಮುಂಡರಗಿಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಇರುವ ಪರಿಚಿತ ಸಮುದಾಯ, ಆಯಾ ಭಾಗದ ಅಧಿಕಾರಿಗಳು, ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಮಕ್ಕಳ ಸ್ನೇಹಿಯಾಗಿ ನಾವಿನ್ಯಯುತ ಸೃಜನಾತ್ಮಕ ಪ್ರಯೋಗ, ಚಟುವಟಿಕೆಗಳೊಂದಿಗೆ ಕಾರ್ಯ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಶಿಡ್ಲಘಟ್ಟದವರಾದ ಎಸ್. ಕಲಾಧರ್ ಅವರು ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗಿನ 23 ವರ್ಷಗಳ ತಮ್ಮ ಸೇವಾ ಅವಧಿಯಲ್ಲಿ ಶಾಲೆಯಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಿದ್ದಾರೆ. ಶಾಲೆಯಾಚೆಗೂ, ಮಕ್ಕಳ ಶಿಕ್ಷಣ ಮತ್ತು ಸಾಹಿತ್ಯದ ಕೆಲಸಗಳಲ್ಲಿ ನಿರತವಾಗಿರುವ ಇವರು “ನವಿಲಗರಿ” ಎಂಬ ಮಕ್ಕಳ ಮಾಸಿಕ ಪ್ರಾರಂಭಿಸಿ ಎರಡು ವರ್ಷ ನಿರ್ವಹಿಸಿದ್ದಾರೆ. ಮಕ್ಕಳ ಗೋಡೆ ಪತ್ರಿಕೆ “ಬೇಲಿಹೂ”ನ ಪ್ರಕಟಣೆ ನಿರ್ವಹಿಸಿದ್ದಾರೆ. ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಕ್ಕಳಿಂದ ಚಿತ್ರ, ಕಥೆ, ಕವನ ಬರೆಸಿ ಮಕ್ಕಳ ಜೀವನಾನುಭವವನ್ನು ಕ್ರೂಡೀಕರಿಸಿ ಎಂಟು ವರ್ಷಗಳ ಕಾಲ ಶಾಮಂತಿ ಎಂಬ ಪುಸ್ತಕದ ಮಾಲೆಯನ್ನು ಹೊರತಂದಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ “ಗೋಡೆತೇರು” ಗೋಡೆ ಪತ್ರಿಕೆಯ ವಿನ್ಯಾಸ ಹಾಗೂ ಸಂಪಾದಕೀಯ ಸಮಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ “ಬಾಲನಂದಿ” ಮಕ್ಕಳ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.