ತಾಲ್ಲೂಕಿನ ಸುಗಟೂರು ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಜಿಲ್ಲಾ ನೆಹರು ಯುವಕೇಂದ್ರ, ಬೆಂಗಳೂರಿನ ಗಾಂಧಿಭವನ ಕರ್ನಾಟಕ ಗಾಂಧಿಸ್ಮಾರಕ ನಿಧಿ, ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾಯೋಜನಾಕೋಶ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ, ರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ, ಆರೋಗ್ಯಕಾರ್ಯಕರ್ತೆಯರಿಗೆ ಕೊರೊನಾ ವಾರಿಯರ್ಸ್ ಪ್ರಶಸ್ತಿ ಪ್ರದಾನ, ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವಿತರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ದೇಶದ ಅಭಿವೃದ್ಧಿಯು ಗುಣಮಟ್ಟದ ಮಾನವ ಸಂಪನ್ಮೂಲವನ್ನು ಅವಲಂಬಿಸಿದ್ದು, ಯುವಸಂಪನ್ಮೂಲವನ್ನು ಸರ್ವಶ್ರೇಷ್ಟ ಮಟ್ಟದಲ್ಲಿ ಸನ್ನದ್ಧಗೊಳಿಸಬೇಕಿದೆ. ಶೈಕ್ಷಣಿಕ, ನೈತಿಕ ಮೌಲ್ಯಗಳನ್ನು ಬೆಳೆಸಲು ಪೂರಕವಾದ ಸಹಪಠ್ಯಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಕ್ರಿಯಾಶೀಲತೆ, ಸೃಜನಶೀಲತೆಯನ್ನು ಬೆಳೆಸಬಹುದು ಎಂದು ಅವರು ತಿಳಿಸಿದರು.
ರಾಷ್ಟ್ರದ ಸಮಗ್ರ ಪ್ರಗತಿಯಲ್ಲಿ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳ ಪಾತ್ರವು ಮಹತ್ತರವಾದುದು. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ವೃದ್ಧಿಸಿಕೊಳ್ಳಲು ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕಿದೆ. ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಸಂದರ್ಭೋಚಿತ ಮಾರ್ಗದರ್ಶನದ ಅಗತ್ಯವಿದೆ ಎಂದರು.
ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಮಕ್ಕಳಿಗೆ ಪೌಷ್ಟಿಕಾಂಶಯುತ ಆಹಾರ, ಉತ್ತಮ ಸಂಸ್ಕಾರ, ಚಟುವಟಿಕೆಯುತ ಶಿಕ್ಷಣ ನೀಡುವುದರೊಂದಿಗೆ ಬದುಕಿನ ಶಿಕ್ಷಣ ನೀಡಬೇಕು. ಆ ಮೂಲಕ ದೈಹಿಕ, ಮಾನಸಿಕ, ಸಾಂಸ್ಕೃತಿಕ ಸದೃಡತೆಯನ್ನು ಗಳಿಸಿಕೊಂಡು ಸ್ವಾವಲಂಬನೆಯಿಂದ ಬದುಕುವ ಗುಣವನ್ನು ಬೆಳೆಸಬೇಕು ಎಂದರು.
ಶಿಡ್ಲಘಟ್ಟ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಲು ಪ್ರೇರೇಪಿಸಿ ಕರ್ನಾಟಕದ ನೆಲ, ಜಲ, ಸಾಹಿತ್ಯ, ಕಲೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸುಗಟೂರು ಶಾಲೆಯ ಶಿಕ್ಷಕರು ಶ್ರಮವಹಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಕಾಲಘಟ್ಟಕ್ಕೆ ಅನುಗುಣವಾಗಿ ಆನ್ಲೈನ್ ಮೂಲಕ ನಡೆದ ಶಿಬಿರದಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಮಾಡುವ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ನಾಂದಿ ಹಾಡಲಾಗಿದೆ ಎಂದರು.
ಗ್ರಾಮಪಂಚಾಯಿತಿ ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ ಅವರು ಶಾಲೆಗೆ 10 ಸಾವಿರ ರೂ.ಗಳ ಟೇಬಲ್ಗಳನ್ನು ಕೊಡಿಸಿದರು. ಮುಂದಿನ ವರ್ಷದಲ್ಲಿ ನಡೆಯುವ ಅಂತರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂಗಳ ಸಹಾಯಧನವನ್ನು ಘೋಷಿಸಿದರು.
ಕೊರೊನಾ ಸಂದರ್ಭದಲ್ಲಿ ಆರೋಗ್ಯ ಸಂರಕ್ಷಣೆ ಕುರಿತ ಜಾಗೃತಿಯ ಭಿತ್ತಿಪತ್ರ, ಕಿರು ಹೊತ್ತಿಗೆಗಳನ್ನು ಬಿಡುಗಡೆಮಾಡಲಾಯಿತು. ಪುಣೆಯ ಅಂತರಭಾರತಿ ಮತ್ತು ನವದೆಹಲಿಯ ರಾಷ್ಟ್ರೀಯ ಯುವಯೋಜನೆಯ ವತಿಯಿಂದ ಅಕ್ಟೋಬರ್ 2 ರಿಂದ 30 ರವರೆಗೆ ಆಲ್ಲೈನ್ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಎಸ್.ಆರ್.ಮೋಹನ್, ಎಸ್.ಎನ್.ಅನುಷಾ, ಎಸ್.ಎನ್.ಹೇಮಾ, ಎಸ್.ಕೆ.ದಾಕ್ಷಾಯಿಣಿ, ಎಸ್.ಆರ್.ಮೊನಿಕಾ, ಎಸ್.ಆರ್, ಶಿವಪ್ರಸಾದಾರಾಧ್ಯ. ಎಸ್.ಪಿ.ಧನುಷ್ಗೌಡ, ನಯನಾ, ಲಾವಣ್ಯ, ಎಸ್.ಎಂ.ನಂದಿನಿ, ಎಸ್.ಎನ್.ನಂದು ಅವರಿಗೆ ಪ್ರಶಸ್ತಿ ವಿತರಿಸಲಾಯಿತು. ಜಂಗಮಕೋಟೆ ಪ್ರಾಥಮಿಕ ಆರೋಗ್ಯಕೇಂದ್ರದ ಕಿರಿಯ ಶುಶ್ರೂಷಕಿ ಎನ್.ಆಶಾ, ಆರೋಗ್ಯಕಾರ್ಯಕರ್ತೆ ಭಾಗ್ಯಮ್ಮ, ಲಕ್ಷ್ಮಮ್ಮ ಅವರಿಗೆ ಕೊರೋನಾ ವಾರಿಯರ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಕ್ಕಳಶಿಬಿರದಲ್ಲಿ ಪಾಲ್ಗೊಳ್ಳಲು ಮಕ್ಕಳನ್ನು ಪ್ರೇರೇಪಿಸಿದ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರಿಗೆ ರಾಷ್ಟ್ರೀಯ ಯುವಯೋಜನೆ ವತಿಯಿಂದ ಶಿಕ್ಷಕಸಂಘಟಕ್ ಪ್ರಶಸ್ತಿ, ಫಲಕ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಯುವಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ್ ಅವರು ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ತಲಾ 2500 ರೂ.ಗಳ ಗಿಫ್ಟ್ ಕೂಪನ್ಗಳನ್ನು ವಿತರಿಸಿದರು. ಎಸ್ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಜಿಲ್ಲಾ ನೆಹರು ಯುವಕೇಂದ್ರದ ಯುವಪ್ರತಿನಿಧಿ ಎಚ್.ಸಿ.ಶ್ರೀಧರ್, ಸ್ವಯಂಸೇವಕ ವಿ.ಪ್ರಮೋದ್, ಗ್ರಾಮಪಂಚಾಯತಿ ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಭಾಗ್ಯಮ್ಮಅರುಣ್ಕುಮಾರ್, ಶಿವಶಂಕರಪ್ಪ, ಎಂ.ದೇವರಾಜು, ಎಂಪಿಸಿಎಸ್ ಅಧ್ಯಕ್ಷ ಮಂಜುನಾಥ್,ಎಸ್ಡಿಎಂಸಿ ಉಪಾಧ್ಯಕ್ಷ ಜಗದೀಶ್, ಸದಸ್ಯೆ ನರಸಮ್ಮ, ವಿನುತಾ, ಬಚ್ಚೇಗೌಡ, ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ನಾರಾಯಣಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಮ್ಮ, ಜಯಂತಿ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜು, ಲಕ್ಷ್ಮಯ್ಯ, ಬಿ.ನಾಗರಾಜು, ಶಿಕ್ಷಕಿ ತಾಜೂನ್ ಹಾಜರಿದ್ದರು.