
Sidlaghatta : ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದ 12 ಮಂದಿ ಅಭ್ಯರ್ಥಿಗಳ ನಾಮಪತ್ರಗಳನ್ನು ವ್ಯಕ್ತಿಯೊಬ್ಬ ಹರಿದು ಹಾಕಿರುವ ಘಟನೆ ತಾಲ್ಲೂಕಿನ ಮರಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆಯಲಿದ್ದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆ ಬಯಸಿ ಗ್ರಾಮದ ಚಿಕ್ಕನಾರಾಯನಸ್ವಾಮಿ ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಹಿಂಪಡೆಯಲು ಸೋಮವಾರ ಅವಕಾಶ ನೀಡಲಾಗಿತ್ತು. ಅದರಂತೆ ಚುನಾವಣಾಧಿಕಾರಿ ಬಳಿ ಬಂದ ಚಿಕ್ಕನಾರಾಯಣಸ್ವಾಮಿ ನಾನು ನಾಮಪತ್ರ ಹಿಂಪಡೆಯಲಿದ್ದೇನೆ ಎಂದು ಹೇಳಿ ಸಹಿ ಮಾಡಿದ ನಂತರ ಚುನಾವಣಾಧಿಕಾರಿಯ ಪಕ್ಕದಲ್ಲಿದ್ದ ಉಳಿದ 12 ಅಭ್ಯರ್ಥಿಗಳ ನಾಮಪತ್ರಗಳಿದ್ದ ಬ್ಯಾಗನ್ನು ಕಸಿದುಕೊಂಡು ಹೊರಬಂದು ಹರಿದು ಹಾಕಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮರಿಹಳ್ಳಿ ಹಾಲು ಉತ್ಪಾದಕರ ಸಂಘದ ಚುನಾವಣಾಧಿಕಾರಿ ಕೆ.ಎಸ್.ಭಾಸ್ಕರರೆಡ್ಡಿ ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.