Sidlaghatta : ಆಹಾರ ಇಲಾಖೆ ಅಧಿಕಾರಿಗಳ ಕಣ್ಣು ತಪ್ಪಿಸಿ ಬಡವರಿಗೆ ಸೇರಬೇಕಾದ 53 ಕ್ವಿಂಟಲ್ ರಾಗಿಯನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಮಾಲೀಕನ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.
ಈ ಸಂಬಂಧ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಶುಕ್ರವಾರ ಮಧ್ಯರಾತ್ರಿ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ಆಹಾರ ಇಲಾಖೆ ನಿರೀಕ್ಷಕಿ ವೆಂಕಟಲಕ್ಷ್ಮಿ ಮತ್ತು ಸಿಬ್ಬಂದಿ, ಅಕ್ರಮವಾಗಿ ಸಾಗಣೆ ಮಾಡಿ ಸೊಣ್ಣಗಾನಹಳ್ಳಿ ಗ್ರಾಮದಲ್ಲಿ ಶೇಖರಣೆ ಮಾಡಿದ್ದ ರಾಗಿಯನ್ನು ಪತ್ತೆ ಮಾಡಿದ್ದಾರೆ. ಈ ಸಂಬಂಧ ಪಡಿತರ ವಿತರಣೆ ಕೇಂದ್ರದ ಮಾಲೀಕ ಎಸ್.ವಿ. ರಂಗನಾಥ್ ವಿರುದ್ಧ ಮುಂದಿನ ಕ್ರಮಕ್ಕೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಆಹಾರ ಇಲಾಖೆ ನಿರೀಕ್ಷಕಿ ವೆಂಕಟಲಕ್ಷ್ಮಿ ತಿಳಿಸಿದ್ದಾರೆ.








