Sidlaghatta : “ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರ ಬದುಕನ್ನು ಕಿತ್ತುಕೊಳ್ಳುವ KIADB ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ನಮ್ಮ ಹೋರಾಟ ನಿಲ್ಲದು. ಕೇವಲ 471 ಎಕರೆ ಬಿಡುಗಡೆಯಿಂದ ಸಮಾಧಾನವಾಗುವುದಿಲ್ಲ, ಗುರುತಿಸಲಾದ ಇಡೀ 2,823 ಎಕರೆ ಜಮೀನನ್ನು ಕೈಬಿಡುವವರೆಗೂ ವಿಶ್ರಮಿಸುವುದಿಲ್ಲ,” ಎಂದು ಹಸಿರು ಸೇನೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಗುಡುಗಿದರು.
ಜಂಗಮಕೋಟೆ ಕ್ರಾಸ್ನಲ್ಲಿ ಮಂಗಳವಾರ ನಡೆದ KIADB ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು. ರೈತರ ಹಿತದೃಷ್ಟಿಯಿಂದ ಶಾಸಕ ಬಿ.ಎನ್.ರವಿಕುಮಾರ್ ಅವರು 471 ಎಕರೆ ಕೃಷಿ ಭೂಮಿಯನ್ನು ಕೈಬಿಡಿಸುವಲ್ಲಿ ಯಶಸ್ವಿಯಾಗಿರುವುದನ್ನು ಸ್ವಾಗತಿಸಿದ ಅವರು, ಉಳಿದ ಜಮೀನಿನ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಸರಕಾರಿ ಜಮೀನಿನಲ್ಲೂ ಕೃಷಿಕರ ಬದುಕು: “ಕೆಐಎಡಿಬಿ ಗುರುತಿಸಿರುವ ಉಳಿದ ಜಮೀನಿನಲ್ಲಿ ಕೇವಲ ಬಂಜರು ಭೂಮಿ ಇಲ್ಲ. ಅಲ್ಲಿ ಸಾವಿರಾರು ರೈತರು ದಶಕಗಳಿಂದ ಸರಕಾರಿ ಜಮೀನಿನಲ್ಲೇ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ನಮೂನೆ 51, 53 ಹಾಗೂ 57 ರಡಿ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಇವರೆಲ್ಲರೂ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಸರ್ಕಾರಿ ಜಮೀನು ಎಂಬ ಕಾರಣಕ್ಕೆ ಅದನ್ನು ಕಿತ್ತುಕೊಂಡರೆ ಈ ಕುಟುಂಬಗಳು ಬೀದಿಗೆ ಬೀಳುತ್ತವೆ,” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಡಿಸಿ ಕಚೇರಿ ಮುತ್ತಿಗೆಯ ಎಚ್ಚರಿಕೆ: ಇಡೀ ಯೋಜನೆಯನ್ನು ಜಂಗಮಕೋಟೆಯಿಂದ ಹಿಂಪಡೆಯುವವರೆಗೂ ರೈತರು ಹಿಂದೆ ಸರಿಯುವುದಿಲ್ಲ. ಶೀಘ್ರದಲ್ಲೇ ನೂರಾರು ರೈತರು ಒಗ್ಗೂಡಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೋರಾಟ ಸಮಿತಿ ಎಚ್ಚರಿಸಿದೆ. ಸಭೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ, ತಾದೂರು ಮಂಜುನಾಥ್ ಸೇರಿದಂತೆ ಹತ್ತಾರು ಹಳ್ಳಿಗಳ ರೈತ ಮುಖಂಡರು ಭಾಗವಹಿಸಿದ್ದರು.








