Hosapete, Jangamakote, Sidlaghatta : ರೇಷ್ಮೆ ಮತ್ತು ಹಾಲು ಉತ್ಪಾದನೆಯಲ್ಲಿ ಪ್ರಸಿದ್ದಿಯಾಗಿರುವ ಕೋಲಾರ-ಚಿಕ್ಕಬಳ್ಲಾಪುರ ಅವಳಿ ಜಿಲ್ಲೆಯ ರೈತರು ನೂತನ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿಯನ್ನು ಮತ್ತಷ್ಟು ಲಾಭದಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆಯಲ್ಲಿನ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣ ಕೇಂದ್ರಕ್ಕೆ ಭೇಟಿ ನೀಡಿ ರೈತರ ಜೊತೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.
ರಾಜ್ಯದ ಗಡಿ ಅಂಚಿನಲ್ಲಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ ರೈತರು ಅತ್ಯುತ್ತಮ ಕೃಷಿಕರು ಹಾಗೂ ಶ್ರಮಜೀವಿಗಳು. ಸಿಗುವ ಅತ್ಯಲ್ಪ ನೀರಿನಲ್ಲಿಯೇ ಅತ್ಯುತ್ತಮ ಬೆಳೆ ಬೆಳೆದು ಮಾದರಿಯಾಗಿದ್ದಾರೆ. ಈ ಜಿಲ್ಲೆ ಹೈನುಗಾರಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ನೀರು ಕೇಳಿದರೆ ಹಾಲು ಕೊಡುವ ಜನರು ಸಿಗುತ್ತಾರೆ. ಈ ಜಿಲ್ಲೆ ಸಿಲ್ಕ್ ಮತ್ತು ಮಿಲ್ಕ್ ಗೆ ಪ್ರಸಿದ್ದಿಯಾಗಿದೆ. ಅವಳಿ ಜಿಲ್ಲೆಯ ರೈತರು ಹೈನುಗಾರಿಕೆ ಮತ್ತು ಕೃಷಿಯನ್ನು ಹೆಚ್ಚು ಅವಲಂಬಿಸಿದ್ದು ಪ್ರತಿ ವರ್ಷ ಬೆಳೆದ ತರಕಾರಿಗಳನ್ನು ರೈತರು ಧರ್ಮಸ್ಥಳಕ್ಕೆ ಕಳುಹಿಸಿಕೊಡುವ ಮೂಲಕ ಕ್ಷೇತ್ರದ ಬಗ್ಗೆ ಆಪಾರ ಅಭಿಮಾನವನ್ನು ಹೊಂದಿದವರಾಗಿದ್ದಾರೆ. ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುವುದರ ಮೂಲಕ ಇನ್ನೂ ಹೆಚ್ಚಿನ ರೀತಿಯಲ್ಲಿ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡಿಕೊಂಡು ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.
ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಯೋಜನಾಧಿಕಾರಿ ಅಜಯ್, ಬೋರಣ್ಣ, ಸುಮಂಗಲಾ, ದಯಾನಂದ್, ರಾಜೇಶ್, ಸುಶೀಲಮ್ಮ, ಅನಿಲ್, ಮನುಷಾ ಹಾಜರಿದ್ದರು.