Home News ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0
Sidlaghatta Kannada Rajyotsava Artists Felicitation Program

ಕಲಾವಿದರು ಸಮಾಜವನ್ನು ತಿದ್ದುವ ಪ್ರಕ್ರಿಯೆಯ ದೊಡ್ಡ ಭಾಗವಾಗಬೇಕು. ನೃತ್ಯ, ಸಂಗೀತ, ನಟನೆ ಕೇವಲ ಅಭಿವ್ಯಕ್ತಿಯಲ್ಲ, ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಬಲ್ಲ ಶಕ್ತಿಯಿರುವ ಕಲೆಯಿಂದ ಉತ್ತಮ ಸಮಾಜ, ಅಭಿರುಚಿಯುಳ್ಳ ಮನಸ್ಸುಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಚಂದ್ರಶೇಖರ್ ತಿಳಿಸಿದರು.

 ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ಜನಪರ ವೇದಿಕೆಯ ಸಾಂಸ್ಕೃತಿಕ ಘಟಕದಿಂದ ಆಯೋಜಿಸಲಾಗಿದ್ದ 65 ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ, ಸಾಂಸ್ಕೃತಿಕ ನೃತ್ಯ, ಗೀತ ಗಾಯನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಕಲೆ ಮತ್ತು ಸಾಹಿತ್ಯ ಮನಸ್ಸಿಗೆ ಸಂಸ್ಕಾರ ಕೊಡುವ, ಸಮಾಜವನ್ನು ತಿದ್ದುವ ಕೆಲಸ ಮಾಡುತ್ತದೆ. ಸಮಾಜದ ಶೋಷಿತರ, ದಮನಿತರ, ಕಷ್ಟಕ್ಕೊಳಗಾದವರ ದನಿಯಾಗಿಯೂ ಕಲೆ ಪ್ರದರ್ಶಿತವಾಗಬೇಕು. ಅನುಕರಣೆ ಮಾಡಬೇಡಿ, ಸ್ವಂತಿಕೆ ಬೆಳೆಸಿಕೊಳ್ಳಿ ಎಂದರು.

 ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಭಾಷಾ ಪ್ರೇಮ, ಕಲೆಯ ಅಭಿರುಚಿ ಹಿಂದಿನಿಂದಲೂ ಬೆಳೆಸಿಕೊಂಡು ಬರಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಆಡುತ್ತಿದ್ದ ನಾಟಕಗಳು ಈಚೆಗೆ ಕಡಿಮೆಯಾಗಿವೆ. ಕಲೆಯು ದುಡಿವ ಜನರಿಗೆ ಮನರಂಜನೆ ಹಾಗೂ ಉತ್ಸಾಹ ತುಂಬುತ್ತದೆ ಎಂದರು.

 ನಗರಸಭೆ ಸದಸ್ಯ ಎಂ.ಮುನಿರಾಜು ಮಾತನಾಡಿ, ಸ್ಥಳೀಯ ಕಲಾವಿದರು, ಎಳೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ಈಗಿನ ತಾಂತ್ರಿಕ ಯುಗದಲ್ಲಿ ಕಲಿಕೆಗೆ ನೂರಾರು ಮಾರ್ಗಗಳಿವೆ ಹಾಗೆಯೇ ಕಲಾ ಪ್ರದರ್ಶನಕ್ಕೂ ಹಲವು ಮಾರ್ಗಗಳಿವೆ. ಕಲೆಯನ್ನು ಆಸ್ವಾದಿಸುವ ಮನಸ್ಸುಗಳು ಹೆಚ್ಚಬೇಕು ಎಂದರು.

 ಕರ್ನಾಟಕ ಜನಪರ ವೇದಿಕೆ ತಾಲ್ಲೂಕು ಅಧ್ಯಕ್ಷ ರಾಮಾಂಜನೇಯ, ರೈತ ಸಂಘದ ತಾದೂರು ಮಂಜುನಾಥ್, ಬೆಳ್ಳೂಟಿ ಮುನಿಕೆಂಪಣ್ಣ, ಪ್ರತೀಶ್, ನಗರ ಸಭೆ ಸದಸ್ಯರಾದ ಅನಿಲ್ ಕುಮಾರ್, ನಾರಾಯಣಸ್ವಾಮಿ,  ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜು, ರಾಜೇಶ್ವರಿ, ಮುನಿಂದ್ರ, ಮನೋಹರ್, ದೀಪಿಕಾ, ಮುನಿರಾಜು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version