Sidlaghatta : ಕೃಷಿ ಮಹಾವಿದ್ಯಾಲಯದ ಎರಡನೇ ವರ್ಷದ BSc ಪದವಿಯ 100 ಮಂದಿ ವಿದ್ಯಾರ್ಥಿಗಳು ಹೆಚ್ಚಿನ ತಿಳಿವಳಿಕೆಗಾಗಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಸೋಮವಾರ ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ಹಿಪ್ಪುನೇರಳೆ ತೋಟ, ಹುಳು ಸಾಕಾಣಿಕೆ ಮನೆ ಹಾಗೂ ಸಮಗ್ರ ಕೃಷಿ ತೋಟಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದಿಸಿ, ಮಾಹಿತಿ ಪಡೆದರು.
ಸಮಗ್ರ ಕೃಷಿಯ ಜೊತೆಯಲ್ಲಿ ಕುರಿ, ಕೋಳಿ, ಹಸು, ಎಮ್ಮೆ, ಜೇನು, ಮೀನು ಮುಂತಾದ ಸಾಕಾಣಿಕೆಗಳ ಬಗ್ಗೆ ತಿಳಿವಳಿಕೆ ಪಡೆದು, ರೈತರು ಇಷ್ಟೆಲ್ಲಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾ ಎಂದು ಅಚ್ಚರಿಗೊಂಡರು.
“ಕೆಲಸಕ್ಕೆ ಸೇರಿಕೊಂಡು ಬೇರೆಯವರ ಕೈಕೆಳಗೆ ಬದುಕಬೇಡಿ. ನಿಮ್ಮಲ್ಲಿ ಕನಿಷ್ಠ ಒಂದು ಹೆಕ್ಟೇರ್ ಜಮೀನಿದ್ದರೂ ಸಾಕು, ಸಮಗ್ರ ಕೃಷಿ ಮಾಡಿ. ಒಬ್ಬ ಸರ್ಕಾರಿ ಅಧಿಕಾರಿಗಿಂತ ಹೆಚ್ಚಿನ ಸಂಪಾದನೆ ಮಾಡಬಹುದು” ಎಂದು ರೈತ ಎಚ್.ಜಿ.ಗೋಪಾಲಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ರೈತರಾದ ಎಚ್.ಕೆ.ಸುರೇಶ್, ಪುಟ್ಟೇಗೌಡ, ಸಹಾಯಕ ಪ್ರಾಧ್ಯಾಪಕ ಡಾ.ವಿನೋದ ಹಾಜರಿದ್ದರು.