Anemadugu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಗ್ರಾಮದಲ್ಲಿ ಅಂತಿಮ ವರ್ಷದ BSc(ಆನರ್ಸ್) ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2025-26 ರ ಅಡಿಯಲ್ಲಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಚಿಂತಾಮಣಿಯ ಕುರುಬೂರಿನ ರೇಷ್ಮೆ ಕೃಷಿ ಮಹಾವಿದ್ಯಾಲಯ, ಆನೆಮಡುಗು ಹಾಲು ಉತ್ಪಾದಕರ ಸಂಘದ ಸಹಯೋಗದಲ್ಲಿ ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಚಿಮುಲ್ ಶಿಭಿರ ಘಟಕದ ವ್ಯವಸ್ಥಾಪಕ ಡಾ.ರವಿಕಿರಣ್.ಬಿ.ಆರ್ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ, ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಪ್ರೋಟಿನ್ ಯುಕ್ತ ಆಹಾರವನ್ನ ನೀಡಬೇಕು. ಇದರಿಂದ ಹಾಲಿನಲ್ಲಿ ಫ್ಯಾಟ್ ಪ್ರಮಾಣ ಹೆಚ್ಚುವುದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಹೇಳಿದರು.
ಹಾಲಿನ ಉತ್ಪಾದನೆ ಹೆಚ್ಚಿಸುವುದರಿಂದ ರೈತರು ಹೆಚ್ಚಿನ ಆದಾಯ ಗಳಿಸಬಹುದು, ಕ್ಯಾಲ್ಸಿಯಂ ಮತ್ತು ಮಿನರಲ್ಸ್ ಇರುವ ನ್ಯೂಟ್ರಿಷನ್ ಆಹಾರವನ್ನ ಹಸುಗಳಿಗೆ ಕೊಡಬೇಕು. ಸೀಮೆ ಹುಲ್ಲಿನ ಜೊತೆ ದ್ವಿದಳ ಧಾನ್ಯಗಳ ಹುಲ್ಲನ್ನು ಕೊಡಬೇಕು. ಇದರ ಜೊತೆ ಅಜೋಲವನ್ನ ಕೊಡಬೇಕು. ಹಸುಗಳು ಕೊಡುವ ಹಾಲಿನ ಪ್ರಮಾಣಕ್ಕೆ ತಕ್ಕಂತೆ ಪ್ರೋಟಿನ್ ಯುಕ್ತ ಆಹಾರವನ್ನ ಕೊಡುವುದರಿಂದ ಹಸುವಿನ ಹಾಲಿನಲ್ಲಿ ಫ್ಯಾಟ್ (ಡಿಗ್ರಿ) ಹೆಚ್ಚಾಗುವುದಾಗಿ ಹೇಳಿದರು.
ಗ್ರಾಮದ 12 ಹಸು, 10 ಎಮ್ಮೆ ಸೇರಿದಂತೆ 60 ಕ್ಕೂ ಹೆಚ್ಚು ಕುರಿ ಹಾಗು ಮೇಕೆಗಳಿಗೆ ಚಿಕಿತ್ಸೆ ನೀಡಲಾಯಿತು. ನಾಯಿಗಳಿಗೆ ರೇಬಿಸ್ ಲಸಿಕೆಯನ್ನು ಹಾಕಿಸಲಾಯಿತು.
GKVK ಪ್ರಾಧ್ಯಾಪಕರಾದ ಡಾ.ಸಿ.ಎಂ.ಸವಿತಾ, ಕೆ.ನಾರಾಯಣಸ್ವಾಮಿ, ಪಶು ವೈದ್ಯಾಧಿಕಾರಿ ಡಾ.ಶ್ರೀನಾಥರೆಡ್ಡಿ, ವಿಸ್ತರಣಾಧಿಕಾರಿ ಶಶಿಕುಮಾರ್, ರೈತರು, ಗ್ರಾಮಸ್ಥರು, ರೈತ ಮಹಿಳೆಯರು ಹಾಗು ವಿದ್ಯಾರ್ಥಿಗಳು ಹಾಜರಿದ್ದರು.
For Daily Updates WhatsApp ‘HI’ to 7406303366









