Sidlaghatta : IPL ನಲ್ಲಿ RCB ಕ್ರಿಕೆಟ್ ತಂಡದ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ದುರಂತದ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಮತ್ತು ಮೃತರ ಕುಟುಂಬಗಳಿಗೆ ಅವರಿಂದಲೆ ಪರಿಹಾರವನ್ನು ಕೊಡಿಸಬೇಕೆಂದು ಶಿಡ್ಲಘಟ್ಟದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದರು.
ನಗರದ ಬಿಜೆಪಿಯ ಸೇವಾ ಸೌಧ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್.ಸಿ.ಬಿ ಗೆಲುವಿನ ಸಂಭ್ರಮಾಚರಣೆ ಸಮಯದಲ್ಲಿ ನಡೆದ ಘೋರ ದುರಂತ ನಡೆಯಬಾರದಿತ್ತು. ಈ ದುರಂತದಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ಸಾವಿನ ದುಖವನ್ನು ತಡೆದುಕೊಳ್ಳುವ ಶಕ್ತಿ ಭಗವಂತನು ನೀಡಲೆಂದು ಪ್ರಾರ್ಥಿಸಿದರು.
ಈ ದುರಂತದ ಬಗ್ಗೆ ತನಿಖೆ ಆಗಬೇಕು, ಸರ್ಕಾರ ಅಥವಾ ಆರ್.ಸಿ.ಬಿ ಸಂಸ್ಥೆ ಅಥವಾ ಬೇರೆ ಯಾರದ್ದೇ ತಪ್ಪಾಗಿದ್ದರೂ ಕಾನೂನು ಕ್ರಮ ಜರುಗಿಸಬೇಕು ಮತ್ತು ತಪ್ಪಿತಸ್ಥ ಇಲಾಖೆ ಅಥವಾ ಸಂಸ್ಥೆಯಿಂದ ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇಡೀ ನಾಡಿಗೆ ನಾಡೇ ಆರ್.ಸಿ.ಬಿ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿದ್ದಾಗ ಹೆಚ್ಚಿನ ಜನರು ಸೇರುವುದು ಸಹಜ. ಹೆಚ್ಚಿನ ಭದ್ರತೆ, ಮುಂಜಾಗ್ರತೆವಹಿಸಬೇಕಾದದ್ದು ಸರ್ಕಾರದ ಜವಾಬ್ದಾರಿ, ಇಲ್ಲಿ ಸರ್ಕಾರವೂ ನಿರ್ಲಕ್ಷ್ಯ ತೋರಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ದೂರಿದರು.
ಈ ದುರಂತದಲ್ಲಿ ರಾಜಕಾರಣವನ್ನು ಯಾರು ಕೂಡ ಮಾಡಬಾರದು, ಮೃತರ ಕುಟುಂಬಗಳಿಗೆ ಎಲ್ಲರು ಕೂಡ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದ ಅವರು ನಾನು ಕೂಡ ಚಿಂತಾಮಣಿ ತಾಲ್ಲೂಕಿನಲ್ಲಿ ಮೃತಪಟ್ಟವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಕೈಲಾದ ಆರ್ಥಿಕ ನೆರವನ್ನು ನೀಡಿದ್ದೇನೆ ಎಂದರು.
ಮುಖಂಡರಾದ ಸೀಕಲ್ ಆನಂದಗೌಡ, ಸಂಜೀವಪ್ಪ, ಪುರುಷೋತ್ತಮ, ತಲದುಮ್ಮನಹಳ್ಳಿ ಮಧು, ರಾಮಕೃಷ್ಣಪ್ಪ ಹಾಜರಿದ್ದರು.