Jangamakote, Sidlaghatta : ರಾಸಾಯನಿಕ ವಿಪತ್ತು ಘಟನೆಗಳು ಆಕಸ್ಮಿಕವಾಗಿ ಜರುಗಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಷ್ಟೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ತಾಲ್ಲೂಕಿನ ಜಂಗಮಕೋಟೆಯ ಬಳಿ ಇರುವ ಯು.ಎಸ್.ಕೆ, ಎಲ್.ಪಿ.ಜಿ ಪ್ರೈ ಲಿಮಿಟೆಡ್ ಆವರಣದಲ್ಲಿ ಅಣಕು ಪ್ರದರ್ಶನದ ಮೂಲಕ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.
ತಹಶೀಲ್ದಾರ್ ಬಿ. ಎನ್ ಸ್ವಾಮಿ ಅವರು ಮಾತನಾಡಿ, ಕಾರ್ಖಾನೆಗಳಲ್ಲಿ ಆಕಸ್ಮಿಕವಾಗಿ ಉಂಟಾಗುವ ರಾಸಾಯನಿಕ ದುರಂತಗಳನ್ನು ತಡೆಗಟ್ಟಲು ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆಕಸ್ಮಿಕ ದುರಂತದಿಂದ ಸಂಭವಿಸುವ ಸಾವು ನೋವುಗಳು ಮತ್ತು ನಷ್ಟಗಳನ್ನು ಕನಿಷ್ಠಗೊಳಿಸುವ ನಿಟ್ಟಿನಲ್ಲಿ ಹಾಗೂ ಪರಿಣಾಮಕಾರಿಯಾಗಿ ತುರ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕೆಲಸಗಾರರನ್ನು ಸಿದ್ಧಗೊಳಿಸುವುದು. ವಿಪತ್ತುಗಳನ್ನು ನಿಯಂತ್ರಿಸುವಲ್ಲಿ ಆಡಳಿತ ವರ್ಗದವರಿಗೆ, ಕೆಲಸಗಾರರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಣಕು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಯಾವುದೇ ರೀತಿಯ ಭಯಭೀತರಾಗದೇ ರಾಸಾಯನಿಕ ಸೋರಿಕೆ ಸಂದರ್ಭದಲ್ಲಿ ಧೃತಿಗೆಡದೇ ಆ ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ಮುನ್ನೇಚ್ಚರಿಕೆಗಳ ಬಗ್ಗೆ ಗಮನ ಹರಿಸಿ ತಮ್ಮ ತಮ್ಮ ಪಾತ್ರಗಳನ್ನು ನಿಭಾಯಿಸಬೇಕು.ಇಂತಹ ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಪೊಲೀಸ್, ಅರೋಗ್ಯ, ಅಗ್ನಿಶಾಮಕ ಇಲಾಖೆಗಳು ಸೇರಿದಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಗೆ ತುರ್ತು ತಿಳಿಸಿದರೆ ಜಿಲ್ಲಾಡಳಿತ ಸೂಕ್ತ ತುರ್ತು ಪರಿಹಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಇದು ಕೇವಲ ಒಂದು ಅಣಕು ಪ್ರದರ್ಶನವಾಗಿದ್ದು, ಯಾವುದೇ ವಿಪತ್ತು ಆಕಸ್ಮಿಕವಾಗಿ ಸಂಭವಿಸಿದಾಗ ಅಂತಹ ಸಂದರ್ಭದಲ್ಲಿ ಸುರಕ್ಷಿತವಾಗಿ ಪಾರಾಗುವುದು ಹೇಗೆ ಎಂಬ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಇದನ್ನು ಏರ್ಪಡಿಸಲಾಗಿದೆ ಎಂದರು.
ಸುಮಾರು ಅರ್ಧ ಗಂಟೆಯ ಅಣಕು ಪ್ರದರ್ಶನದಲ್ಲಿ 3 ಆಂಬುಲೆನ್ಸ್, ಪೋಲಿಸ್ ಅಧಿಕಾರಿಗಳ ಹಾಗೂ 25 ಸಿಬ್ಬಂದಿ ಮಂದಿ, ಜಿಲ್ಲಾ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ 200 ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿ ಅಣಕು ಪ್ರದರ್ಶನ ಫಲಕಾರಿಯಾಯಿತು.
ಅಣಕು ಪ್ರದರ್ಶನದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್. ಐ ಖಾಸಿಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ರಾಷ್ಟೀಯ ವಿಪತ್ತು ನಿರ್ವಹಣಾ ಪಡೆಯ ಪ್ರತಿನಿಧಿ ಅಖಿಲೇಶ್ ಚೌದರಿ,ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ಅಗ್ನಿಶಾಮಕ ಅಧಿಕಾರಿ ಬಸವರಾಜು, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಕೆ ಅರುಂಧತಿ, ಯು.ಎಸ್.ಕೆ, ಎಲ್.ಪಿ.ಜಿ ಕಂಪನಿಯ ನಿರ್ದೇಶಕ ಎಸ್. ಆರ್ ಸಂಜಯ್, ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.