Sidlaghatta : ಕನಿಷ್ಠ ಬೆಂಬಲ ಬೆಲೆಗೆ ರಾಗಿ ನೀಡಲು ನೋಂದಾಯಿಸಿಕೊಂಡ ತಾಲ್ಲೂಕಿನ ಎಲ್ಲ ರೈತರು ಆದಷ್ಟು ಬೇಗ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಬೇಕೆಂದು ತಹಶೀಲ್ದಾರ್ ಎನ್.ಗಗನ ಸಿಂಧು ಅವರು ರೈತರಲ್ಲಿ ಮನವಿ ಮಾಡಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳ ಜತೆ ವರದಹಳ್ಳಿಯಲ್ಲಿನ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ತಾಲ್ಲೂಕಿನ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇಡೀ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪೈಕಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು (2055 ಮಂದಿ) ರಾಗಿ ಮಾರಾಟ ಮಾಡಲು ಈಗಾಗಲೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇದುವರೆಗೂ 130 ರೈತರಷ್ಟೆ ರಾಗಿಯನ್ನು ತಂದು ಮಾರಾಟ ಮಾಡಿದ್ದಾರೆ.
44474.50 ಕ್ವಿಂಟಾಲ್ ರಾಗಿ ಪೈಕಿ 2995.50 ಕ್ವಿಂಟಾಲ್ ನಷ್ಟು ರಾಗಿಯನ್ನು ಮಾತ್ರ ರಾಗಿ ಖರೀದಿ ಕೇಂದ್ರದಲ್ಲಿ ತಂದು ಮಾರಾಟ ಮಾಡಿದ್ದಾರೆ ಎಂದರು.
ಪ್ರತಿ ಕ್ವಿಂಟಾಲ್ ರಾಗಿಗೆ 4866 ರೂಗಳನ್ನು ನಿಗದಿಪಡಿಸಿರುವ ಸರ್ಕಾರದ ಬೆಂಬಲ ಬೆಲೆಗೆ ರಾಗಿ ಖರೀದಿ ಯೋಜನೆಗೆ ಮಾರ್ಚ್ 26ರ ಕಡೆಯ ದಿನವಾಗಿದ್ದು ಉಳಿದ ರೈತರು ಕೂಡಲೆ ಈಗಾಗಲೆ ನೋಂದಾಯಿಸಿಕೊಂಡ ಪ್ರಮಾಣದ ರಾಗಿಯನ್ನು ನಿಗಧಿಪಡಿಸಿದ ವೇ ಬ್ರಿಡ್ಜ್ ಗಳಲ್ಲಿ ತೂಕ ಮಾಡಿಸಿಕೊಂಡು ಬಂದು ರಾಗಿಯನ್ನು ಮಾರಾಟ ಮಾಡಬೇಕೆಂದು ರೈತರಲ್ಲಿ ಕೋರಿದರು.
ಆಹಾರ ಶಿರಸ್ತೇದಾರ್ ಮೋಹನ್ ಕುಮಾರ್ ಮಾತನಾಡಿ, ತಾಲ್ಲೂಕಿನ ಹನುಮಂತಪುರ ಗೇಟ್ ಬಳಿಯಿರುವ ಸುಮುಖ ವೇ ಬ್ರಿಡ್ಜ್ ಹಾಗೂ ನಗರದ ದಿಬ್ಬೂರಹಳ್ಳಿಯ ಬೈಪಾಸ್ ರಸ್ತೆಯ ಮಾರುತಿ ವೇ ಬ್ರಿಡ್ಜ್ಗಳನ್ನು ಗುರುತಿಸಲಾಗಿದ್ದು ರೈತರು ಇಲ್ಲಿ ರಾಗಿಯನ್ನು ತೂಕ ಮಾಡಿಸಿಕೊಂಡು ಸೂಕ್ತ ದಾಖಲೆ ತರಬೇಕು.
ಮಾರ್ಚ್ 26ರವರೆಗೆ ಮಾತ್ರ ರಾಗಿ ಖರೀದಿ ಕೇಂದ್ರ ಕಾರ್ಯನಿರ್ವಹಿಸಲಿದೆ. ನೋಂದಾಯಿಸಿರುವ ರೈತರ ಪೈಕಿ ಶೇ 10ಷ್ಟು ರೈತರು ಮಾತ್ರವೇ ರಾಗಿ ಮಾರಾಟ ಮಾಡಿದ್ದು ಇನ್ನುಳಿದ ರೈತರು ಆದಷ್ಟು ಬೇಗನೆ ರಾಗಿ ಮಾರಾಟ ಮಾಡಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಆಹಾರ ನಿರೀಕ್ಷಕ ಪ್ರಕಾಶ್, ರಾಗಿ ಮಾರಾಟ ಮಾಡಲು ಬಂದಿದ್ದ ರೈತರು ಹಾಜರಿದ್ದರು.








