Sidlaghatta : ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಹಾಗೂ ಸದಸ್ಯರ ತಂಡ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ ಮತ್ತು ಆಶ್ರಯ ಬಡಾವಣೆಯ ಅಂಗನವಾಡಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಂದ ಬಂದ ಅಹವಾಲುಗಳ ಹಿನ್ನೆಲೆಯಲ್ಲಿ ನಡೆದ ಈ ಪರಿಶೀಲನೆಯಲ್ಲಿ, ಆಸ್ಪತ್ರೆ ಮತ್ತು ಅಂಗನವಾಡಿಗಳ ಕಾರ್ಯವಿಧಾನದಲ್ಲಿ ಕಂಡು ಬಂದ ಅವ್ಯವಸ್ಥೆಗಳ ಬಗ್ಗೆ ಆಯೋಗ ಗಂಭೀರ ಅಸಮಾಧಾನ ವ್ಯಕ್ತಪಡಿಸಿತು.
100 ಹಾಸಿಗೆಗಳ ಆಸ್ಪತ್ರೆಯಾದರೂ ಕೇವಲ 42 ಮಂದಿ ಮಾತ್ರ ದಾಖಲಾಗಿರುವುದನ್ನು ಗಮನಿಸಿದ ಅಧ್ಯಕ್ಷರು, “ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದಿರುವುದು, ಸಣ್ಣ ವಿಷಯಕ್ಕೂ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸುವುದು ಈ ಸ್ಥಿತಿಗೆ ಕಾರಣವಾಗಿದೆ. ಜನರಿಗೆ ಆಸ್ಪತ್ರೆಯ ಮೇಲಿನ ನಂಬಿಕೆ ಕುಸಿದಿದೆ” ಎಂದು ವೈದ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳಲ್ಲಿ ಕೇವಲ 17 ಹೆರಿಗೆ ಪ್ರಕರಣಗಳು ಮಾತ್ರ ದಾಖಲಾಗಿರುವ ಬಗ್ಗೆ ಪ್ರಶ್ನಿಸಿದ ಅವರು, “ತಾಲ್ಲೂಕು ಕೇಂದ್ರದ ಆಸ್ಪತ್ರೆಗೆ ಈಷ್ಟು ಕಡಿಮೆ ದಾಖಲೆ ಎಂದರೆ ಏನು ಅರ್ಥ” ಎಂದರು.
“ಬಡ ರೋಗಿಗಳು ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಆದರೆ ಇಲ್ಲಿನ ನಿರ್ವಹಣೆ ಸರಿಯಾಗಿ ನಡೆಯದಿರುವುದರಿಂದ ಜನರು ದೂರ ಉಳಿಯುತ್ತಿದ್ದಾರೆ. ಬಾಣಂತಿ ಮಹಿಳೆಯರಿಗೆ ಅನುದಾನ ಇಲ್ಲವೆಂದು ತಿಂಡಿ-ಊಟ ನೀಡದಿರುವುದು ಅಸಹ್ಯಕರ. ಜನಪ್ರತಿನಿಧಿಗಳು ಮತ್ತು ದಾನಿಗಳನ್ನು ಸಂಪರ್ಕಿಸಿ ಆಹಾರ ವ್ಯವಸ್ಥೆ ಮಾಡಬೇಕು” ಎಂದು ಸೂಚಿಸಿದರು. ಸಿಬ್ಬಂದಿಯ ಮಾನವೀಯತೆ ಕೊರತೆಯನ್ನು ಟೀಕಿಸಿದ ಅವರು, “ಸಂಬಳಕ್ಕೆ ಮಾತ್ರ ಕೆಲಸ ಮಾಡದೇ, ಸೇವಾಭಾವನೆಯೂ ಇರಲಿ” ಎಂದು ಪಾಠ ನೀಡಿದರು.
ಇದಕ್ಕೂ ಮೊದಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರ, ಮೊಟ್ಟೆ ವಿತರಣೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದರು. ಕೆಲವರಿಗೆ ಕಡಿಮೆ ಸಂಖ್ಯೆಯಲ್ಲಿ ಮೊಟ್ಟೆಗಳು ವಿತರಿಸಿರುವುದು ಬೆಳಕಿಗೆ ಬಂತು.
ಆಹಾರ ಆಯೋಗದ ಸದಸ್ಯರು ಲಿಂಗರಾಜು ಕೋಟೆ, ಸುಮಂತ್ ರಾವ್, ಮಾರುತಿ ದೊಡ್ಡಲಿಂಗಣ್ಣನವರ್, ರೋಹಿಣಿ ಪ್ರಿಯಾ, ವಿಜಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ವೆಂಕಟೇಶ್ರೆಡ್ಡಿ, ಆಹಾರ ಇಲಾಖೆ ಪ್ರಕಾಶ್, ಆಡಳಿತ ವೈದ್ಯಾಧಿಕಾರಿ ಡಾ. ಮನೋಹರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366









