Sidlaghatta : ವರ್ಷದ ಆಯಾ ಋತುಮಾನಗಳಲ್ಲಿ ಸಿಗುವ ಸ್ಥಳೀಯ ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದಾಗಿದೆ ಎಂದು ಪ್ರಗತಿಪರ ರೈತ, ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ತಿಳಿಸಿದರು.
ತಮ್ಮ ಮಾವಿನ ತೋಟದಲ್ಲಿ ಸಾವಯವ ಪದ್ದತಿಯಲ್ಲಿ ಮೊದಲ ಫಸಲು ಬಂದಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಮಾವಿನ ಹಣ್ಣು ಹಾಗೂ ನಂದಿನಿ ಹಾಲು ಬ್ರೆಡ್ ವಿತರಿಸಿ ಅವರು ಮಾತನಾಡಿದರು.
ಸಾವಯವ ಪದ್ದತಿಯಲ್ಲಿ ಮಾವಿನ ಫಸಲು ತೆಗೆದಿದ್ದು ಮೊದಲ ಫಸಲಿನ ಎಲ್ಲ ಮಾವಿನ ಹಣ್ಣನ್ನು ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳು ಸೇರಿದಂತೆ ನನ್ನೂರಿನ ಸುತ್ತ ಮುತ್ತಲ ಗ್ರಾಮಗಳ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಲಿದ್ದೇನೆ ಎಂದರು.
ನಾವು ಇಲ್ಲಿನ ವಾತಾವರಣ ಹವಾಗುಣಕ್ಕೆ ಹೊಂದಿಕೊಂಡಿರುತ್ತೇವೆ. ಹಾಗಾಗಿ ಎಲ್ಲೆಲ್ಲೋ ಬೆಳೆದ ಹಣ್ಣುಗಳನ್ನು ಹೆಚ್ಚಿನ ಬೆಲೆ ಕೊಟ್ಟು ಖರೀದಿಸಿ ಸೇವಿಸುವುದಕ್ಕಿಂತಲೂ ಎಲ್ಲ ಹವಾಮಾನದಲ್ಲೂ ಸ್ಥಳೀಯವಾಗಿ ಸಿಗುವ ಎಲ್ಲ ರೀತಿಯ ಹಣ್ಣುಗಳನ್ನು ಸೇವಿಸಿ ನಮ್ಮ ದೇಹಕ್ಕೆ ಬೇಕಾಗುವ ಎಲ್ಲ ಅಂಶಗಳು ಸಿಗಲಿವೆ ಎಂದು ಹೇಳಿದರು.
ಭೂಮಿ ತಾಯಿಯ ಮೇಲೆ ನಂಬಿಕೆ ಇಟ್ಟುಕೊಂಡು ಕೃಷಿ ಮಾಡಿದ ಜಗತ್ತಿಗೆ ಅನ್ನ ಕೊಟ್ಟ ರೈತ ಎಂದಿಗೂ ನಷ್ಟಕ್ಕೆ ಕಷ್ಟಕ್ಕೆ ಸಿಲುಕಿಲ್ಲ. ನಾನು ಬೇರೆ ಬೇರೆ ಉದ್ದಿಮೆಯಲ್ಲಿ ಹಣ ಮಾಡುತ್ತಿದ್ದರೂ ಕೃಷಿಯಲ್ಲಿ ಆತ್ಮ ತೃಪ್ತಿ ಕಂಡುಕೊಂಡಿದ್ದೇನೆ ಎಂದರು.
ಹಾಗಾಗಿ ನಾನು ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಮಾವಿನ ಮೊದಲ ಫಸಲಿನ ಅಷ್ಟೂ ಮಾವಿನ ಹಣ್ಣನ್ನು ಮಾರಾಟ ಮಾಡದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳು, ನಮ್ಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುತ್ತಿದ್ದೇನೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ನಾಗನರಸಿಂಹ, ಕೆ.ನಾರಾಯಣಸ್ವಾಮಿ, ದ್ಯಾವಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಎ.ಶಶಿಕುಮಾರ್, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು








