Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುಭವನ ಕಟ್ಟಡದ ನಿರ್ಮಾಣಕ್ಕೆ ಅಡಿಪಾಯ ಅಗೆಯುವ ಕೆಲಸ ನಡೆಯುತ್ತಿದ್ದು ಸ್ಥಳಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳ ಜತೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈಗಾಗಲೆ ಗುರುಭವನ ಕಟ್ಟಡ ನಿರ್ಮಾಣಕ್ಕೆ ತೆಗೆದಿರುವ ಪಾಯದ ಜಾಗವು ಮೈದಾನದ ಮಧ್ಯಭಾಗದಲ್ಲಿದ್ದು ಅವೈಜ್ಞಾನಿಕವಾಗಿದ್ದ ಕಾರಣ ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ ಆಗಲಿದೆ. ಹಾಗಾಗಿ ಮೈದಾನದ ಒಂದು ಕಡೆ ಗುರುಭವನ ಕಟ್ಟಡ ನಿರ್ಮಾಣ ಆಗುವುದು ಸೂಕ್ತ ಎಂದರು.
ಹಾಗಾಗಿಯೆ ಇದಕ್ಕೂ ಮೊದಲು ಅವೈಜ್ಞಾನಿಕವಾಗಿ ಗುರ್ತಿಸಿದ್ದ ಜಾಗ ಬಿಟ್ಟು ಈ ಕಡೆ ಅಡಿಪಾಯ ತೆಗೆದಿದ್ದೇವೆ. ಯಾಕೆ ಕಾಮಗಾರಿಯನ್ನು ಇದೀಗ ನಿಲ್ಲಿಸಿದ್ದೀರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರ ಕುಮಾರ್ ಅವರನ್ನು ಶಾಸಕ ಬಿ.ಎನ್.ರವಿಕುಮಾರ್ ಅವರು ಪ್ರಶ್ನಿಸಿದರು.
ಗುರುಭವನ ನಿರ್ಮಾಣ ಸಮಿತಿಯ ಅಧ್ಯಕ್ಷರೂ ಆದ ಬಿಇಒ ಅವರು, ಈಗಾಗಲೆ ಮೂರು ಜಾಗಗಳು ಬದಲಾಗಿ ನಾಲ್ಕನೇ ಕಡೆ ಗುರುಭವನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಮುಂಚೆ ನಿರ್ಮಿಸಿದ ಅಡಿಪಾಯದ ನಿರ್ಮಾಣಕ್ಕೆ ವೆಚ್ಚವಾಗಿರುವ ಹಣ ನೀರಲ್ಲಿ ಹೋಮ ಮಾಡಿದಂತೆ ಎಂದೆಲ್ಲಾ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಅದರಿಂದಾದ ಗೊಂದಲದಿಂದಾಗಿ ಎಂದು ತಡಬಡಾಯಿಸಿ ಅಸ್ಟಷ್ಟವಾಗಿ ಉತ್ತರಿಸಿದರು.
ಆ ನಂತರ ಶಾಸಕರು, ಇದೀಗ ಹೊಸದಾಗಿ ಅಡಿಪಾಯ ಹಾಕಿರುವ ಜಾಗವು ಎಲ್ಲ ರೀತಿಯಿಂದಲೂ ಸೂಕ್ತವಾಗಿದೆ. ಉಳಿದ ಜಾಗದಲ್ಲಿ ಆಟದ ಮೈದಾನ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಈ ಹಿಂದಿನವರ ಅವಧಿಯಲ್ಲಿ 10 ಲಕ್ಷ ಹಣ ಬಂದಿದ್ದರೂ 1 ಲಕ್ಷ ಕೂಡ ಖರ್ಚು ಮಾಡದೆ ಉಳಿದ ಹಣ ಡ್ರಾ ಮಾಡಿದಂತೆ ನಾವೇನು ಮಾಡೊಲ್ಲ.
ಇಲ್ಲಿ ಒಂದು ಸರಿಯಾದ ಗುರುಭವನ ಇಲ್ಲ, ನೌಕರ ಭವನ ಇಲ್ಲ, ಅಂಬೇಡ್ಕರ್ ಭವನ ಇಲ್ಲ. ಸೂಕ್ತ ಆಸ್ಪತ್ರೆ ಕೂಡ ಇಲ್ಲ. ಶೈಕ್ಷಣಿಕ ಅಭಿವೃದ್ದಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾನಿದ್ದೇನೆ, ಯಾವುದಕ್ಕೂ ನೀವು ಹೆದರುವ ಅಗತ್ಯವಿಲ್ಲ. ಕೆಲಸ ಆರಂಭಿಸಿ ಎಂದು ತಾಕೀತು ಮಾಡಿದರು.
ತಹಶೀಲ್ದಾರ್ ಎನ್.ಗಗನಸಿಂಧು, ಮುಖಂಡರಾದ ತಾದೂರು ರಘು, ನಾಗಮಂಗಲ ಶ್ರೀನಿವಾಸಗೌಡ, ಕೊತ್ತನೂರು ಲಕ್ಷ್ಮೀಪತಿ, ನವೀನ್, ಸರ್ಕಾರಿ ಪ್ರೌಢಶಾಲೆ ಸಿಬ್ಬಂದಿ ಹಾಜರಿದ್ದರು.








