Sidlaghatta : ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ವಾರದಲ್ಲಿ ಮೂರು ದಿನಗಳ ಕಾಲ ಅಪರ ಜಿಲ್ಲಾ ನ್ಯಾಯಾಲಯವನ್ನು ಶಿಡ್ಲಘಟ್ಟದಲ್ಲಿ ಮಧ್ಯಂತರವಾಗಿ ನ್ಯಾಯಪೀಠಾಸನ ಕಾರ್ಯನಿರ್ವಹಿಸುವಂತೆ ಮಾಡಿಕೊಡುವುದಾಗಿ ಉಚ್ಚನ್ಯಾಯಾಲಯ ಹಾಗೂ ಚಿಕ್ಕಬಳ್ಳಾಪುರ ಆಡಳಿತಾತ್ಮಕ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಭಾನುವಾರ ಗಿಡಗಳನ್ನು ನೆಟ್ಟು, ಇ – ಸೇವಾ ಕೇಂದ್ರ ಮತ್ತು ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ವಕೀಲರು ಚಿಂತಾಮಣಿಗೆ ಹೋಗಿ ಬರಲು ತೊಂದರೆಯಾಗುವುದರಿಂದ ಇಲ್ಲಿಯೇ ನ್ಯಾಯಪೀಠಾಸನ ಬಂದಾಗ ಅನುಕೂಲವಾಗುತ್ತದೆ. ನ್ಯಾಯಾಲಯದ ಆವರಣದಲ್ಲಿ ಇ-ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಮುಖ್ಯ ಉದ್ದೇಶವೆಂದರೆ ವಕೀಲರಿಗೆ ಮತ್ತು ದಾವೆದಾರರಿಗೆ (ಕಕ್ಷಿದಾರರಿಗೆ) ಡಿಜಿಟಲ್ ತಂತ್ರಜ್ಞಾನದ ಮೂಲಕ ನ್ಯಾಯಾಲಯದ ಸೇವೆಗಳನ್ನು ಸುಲಭವಾಗಿ, ಪಾರದರ್ಶಕವಾಗಿ ಮತ್ತು ವೇಗವಾಗಿ ಒದಗಿಸುವುದಾಗಿದೆ. ಇದು ಎಲ್ಲರಿಗೂ ನ್ಯಾಯ ಲಭ್ಯವಾಗುವಂತೆ ಮಾಡುವ ಇ-ಕೋರ್ಟ್ಸ್ ಯೋಜನೆಯ ಒಂದು ಪ್ರಮುಖ ಭಾಗವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಗಿಡಗಳು ನಮ್ಮ ಜೀವನದ ಆಧಾರವಾಗಿವೆ. ಗಿಡ ನೆಡುವುದರಿಂದ ಪರಿಸರ ಸಂರಕ್ಷಣೆ, ಶುದ್ಧ ಗಾಳಿ, ಮಳೆ ಹೆಚ್ಚಳ ಹಾಗೂ ಭೂಮಿಯ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಇಂದು ನಾವು ನೆಡುವ ಒಂದು ಗಿಡ ಭವಿಷ್ಯದ ಪೀಳಿಗೆಗೆ ಅಮೂಲ್ಯವಾದ ಕೊಡುಗೆಯಾಗುತ್ತದೆ. ಪ್ರತಿಯೊಬ್ಬರೂ ಗಿಡಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸಹ ವಹಿಸಬೇಕು. ಹಸಿರು ಪರಿಸರ ನಿರ್ಮಾಣವು ನಮ್ಮೆಲ್ಲರ ಕರ್ತವ್ಯವಾಗಿದೆ. ಮಿಯಾವಾಕಿ ಪದ್ಧತಿಯ ಮೂಲಕ ಗಿಡಗಳನ್ನು ನೆಡುವುದರಿಂದ ಕಡಿಮೆ ಜಾಗದಲ್ಲೇ ದಟ್ಟವಾದ ಅರಣ್ಯವನ್ನು ನಿರ್ಮಿಸಬಹುದು. ಇದು ಪರಿಸರ ಸಂರಕ್ಷಣೆ, ವಾಯು ಮಾಲಿನ್ಯ ನಿಯಂತ್ರಣ, ಭೂಗರ್ಭ ಜಲಮಟ್ಟದ ವೃದ್ಧಿ ಹಾಗೂ ಜೈವ ವೈವಿಧ್ಯತೆಯ ರಕ್ಷಣೆಗೆ ಸಹಕಾರಿಯಾಗಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಲಿಂಗೇಗೌಡ, ಅಪರ ಜಿಲ್ಲಾ ನ್ಯಾಯಾಧೀಶರಾದ ಕಾಂತರಾಜು ಮತ್ತು ಸಿದ್ಧಣ್ಣ, ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ್, ಶಿಡ್ಲಘಟ್ಟ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎಸ್.ಸುಕನ್ಯಾ, ಅಪರ ಸಿವಿಲ್ ನ್ಯಾಯಾಧೀಶರಾದ ರಂಜಿತಾ ಮತ್ತು ಭಾವನಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಗಿ ಭಾಸ್ಕರ್, ವಕೀಲರಾದ ಎಂ.ಪಾಪಿರೆಡ್ಡಿ, ಶಾಬುದ್ದೀನ್, ಶಿವಕುಮಾರ್, ಕೃಷ್ಣಮೂರ್ತಿ, ಅಶೋಕ್, ಮೋಹನ್, ಶಾರತ್, ಚಿಕ್ಕಬಳ್ಳಾಪುರ ಉಪವಿಭಾಗದ ಅಂಚೆ ನಿರೀಕ್ಷಕ ಕುಮಾರ್ ಅಭಿನೀತ್, ರಾಬರ್ಟ್ ಸನ್ ಪೇಟೆಯ ಅಂಚೆ ನಿರೀಕ್ಷಕ ಶಶಿಕಿರಣ್, ಶಿಡ್ಲಘಟ್ಟ ಅಂಚೆಕಚೇರಿಯ ಪೋಸ್ಟ್ ಮಾಸ್ಟರ್ ವೈ.ಎನ್.ಚಾಮರಾಜ್, ಕೋರ್ಟ್ ಆವರಣದ ಅಂಚೆಕಚೇರಿಯ ಸಬ್ ಪೋಸ್ಟ್ ಮಾಸ್ಟರ್ ನಂದೀಶ, ಕೋಲಾರ ವಿಭಾಗದ ಮುರಳೀಧರ್, ಶಶಿಕುಮಾರ್, ರವಿಚಂದ್ರ, ಚಿಕ್ಕಬಳ್ಳಾಪುರ ವಿಭಾಗದ ಸಿ.ಎಂ.ಶ್ರೀಧರ್, ಎಚ್.ಪಿ.ಸುರೇಶ್, ಶಿಡ್ಲಘಟ್ಟ ಅಂಚೆ ವಿಭಾಗದ ಎನ್.ಆಶಾ, ಎಸ್.ಯಮುನಾ, ತಥಾಗತ ಘೋಷ್, ನಾಗಮಣಿ ಹಾಜರಿದ್ದರು.








