Jangamakote, Sidlaghatta : KIADB ಅಧಿಸೂಚನೆಯಂತೆ ತಾಲ್ಲೂಕಿನ ಜಂಗಮಕೋಟೆ ಭಾಗದಲ್ಲಿ ಕೈಗಾರಿಕಾ ಪ್ರದೇಶ ಮಾಡಿದಲ್ಲಿ ತಾಲ್ಲೂಕು ಅಭಿವೃದ್ದಿ ಹೊಂದುವ ಜೊತೆಗೆ ಈ ಭಾಗದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಹೇಳಿದರು.
ಜಂಗಮಕೋಟೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಆವರಣದಲ್ಲಿ ಭೂಮಿ ನೀಡಲು ಸಮ್ಮತಿಯಲ್ಲಿರುವ ರೈತರೊಂದಿಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಂಗಮಕೋಟೆ ಭಾಗವು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದರಿಂದ ಕೈಗಾರಿಕಾ ಹೂಡಿಕೆದಾರರ ಗಮನ ಸೆಳೆಯುವಂತಹ ತಾಣವಾಗಿದೆ. ಇಲ್ಲಿ ಕೈಗಾರಿಕೆ ಸ್ಥಾಪನೆಯಾದರೆ, ತಾಲ್ಲೂಕಿನ ಯುವಕ-ಯುವತಿಯರಿಗೆ ಉದ್ಯೋಗದ ಅವಕಾಶಗಳು ಲಭ್ಯವಾಗುತ್ತವೆ. ಇದರಿಂದ ನಿರುದ್ಯೋಗ ಸಮಸ್ಯೆ ಸುಧಾರಣೆಯ ಹಾದಿಗೆ ಬರುತ್ತದೆ. ಯಾವುದೇ ಕೈಗಾರಿಕಾ ವಿಸ್ತರಣೆ ರೈತರ ಭೂಮಿಯಲ್ಲಿಯೇ ನಡೆಯುವುದು ಸಹಜ. ಆದರೆ ರೈತರ ಒಪ್ಪಿಗೆಯಾದ ಮೇಲೆಯೇ ಈ ಕೆಲಸ ನಡೆಯಬೇಕು ಎಂದರು.
ಕದಸಂಸ ತಾಲ್ಲೂಕು ಸಂಚಾಲಕ ಮಳಮಾಚನಹಳ್ಳಿ ರಾಮಾಂಜಿನಪ್ಪ ಮಾತನಾಡಿ, ಜಂಗಮಕೋಟೆ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳು ಹೆಚ್ಚಾಗಿವೆ. ಬಹುಮಾನ್ಯ ಕೃಷಿಭೂಮಿ ಈಗ ಖಾಸಗಿ ಕೈಗಳಲ್ಲಿ ಸೇರುತ್ತಿರುವುದು ಆತಂಕಕಾರಿ. ಸರ್ಕಾರವೇ ಕೈಗಾರಿಕಾ ಪ್ರದೇಶ ಸ್ಥಾಪಿಸಿದರೆ ರೈತರಿಗೆ ಒಳ್ಳೆಯ ಪರಿಹಾರ, ಪಾರದರ್ಶಕ ವ್ಯವಹಾರ ಮತ್ತು ನೆಲೆ ನಿಟ್ಟಿಗೆ ಸಂಬಂಧಿಸಿದ ಭರವಸೆ ಸಿಗುತ್ತದೆ. ಜೊತೆಗೆ ಸಾವಿರಾರು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಐಎಡಿಬಿಗೆ ಭೂಮಿ ನೀಡಲು ಸಮ್ಮತಿರುವ ರೈತರ ಹೋರಾಟ ಸಮಿತಿಯ ಸದಸ್ಯರು — ನಡಿಪಿನಾಯಕನಹಳ್ಳಿ ಸುಬ್ರಮಣಿ, ವಾಸುದೇವಮೂರ್ತಿ, ಯಣ್ಣಂಗೂರು ಪ್ರದೀಪ್, ಗಂಗಾದಾರ್, ನರಸಿಂಹಮೂರ್ತಿ, ಈರಪ್ಪ, ಬಸವಪಟ್ಟಣ ಆಂಜಿನಪ್ಪ, ರಾಮದಾಸ್ ಪ್ರಭುಗೌಡ, ಮುನೇಗೌಡ, ವೆಂಕಟೇಶ್, ಕೊಲಿಮಿಹೊಸುರು ಚಿನ್ನಪ್ಪ, ಸತೀಶ, ಬಾಬು, ಜಂಗಮಕೋಟೆಯ ಮಂಜುನಾಥ್ ಸೇರಿದಂತೆ 13 ಹಳ್ಳಿಗಳ ರೈತರು ಉಪಸ್ಥಿತರಿದ್ದರು.