Home News ನ. 24 ರಂದು ಶಿಡ್ಲಘಟ್ಟಕ್ಕೆ JDS ಪಂಚರತ್ನ ರಥಯಾತ್ರೆ

ನ. 24 ರಂದು ಶಿಡ್ಲಘಟ್ಟಕ್ಕೆ JDS ಪಂಚರತ್ನ ರಥಯಾತ್ರೆ

0
Sidlaghatta JDS Pancharatna Yatra

Varadanayakanahalli, Sidlaghatta : JDS ಪಂಚರತ್ನ ರಥಯಾತ್ರೆಯು (Pancharatna Yatra) ನವೆಂಬರ್ 18ರಂದು ಶುಕ್ರವಾರ ಮುಳಬಾಗಿಲಿನಿಂದ ಪುನರಾರಂಭವಾಗಿದೆ. ನವೆಂಬರ್ 24 ರಂದು ಶಿಡ್ಲಘಟ್ಟ ತಾಲ್ಲೂಕಿಗೆ ಆಗಮಿಸಲಿದೆ ಎಂದು ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ವರದನಾಯಕನಹಳ್ಳಿಯ ಪಟಾಲಮ್ಮ ದೇವಸ್ಥಾನದಲ್ಲಿ ಶನಿವಾರ ಜೆಡಿಎಸ್ ಪಕ್ಷದ ವತಿಯಿಂದ ಶಿಡ್ಲಘಟ್ಟ ವಿಧಾನಸಭಾ ವ್ಯಾಪ್ತಿಯಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆಯನ್ನು ಕುರಿತಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಚಿಂತಾಮಣಿ ತಾಲ್ಲೂಕಿನ ಕೈವಾರದಿಂದ ನವೆಂಬರ್ 24 ರಂದು ಶಿಡ್ಲಘಟ್ಟ ತಾಲ್ಲೂಕಿಗೆ ಆಗಮಿಸುವ ಪಂಚರತ್ನ ರಥಕ್ಕೆ ಹುಣಸೇನಹಳ್ಳಿ ಸ್ಟೇಷನ್ ಬಳಿ ವಿಶೇಷ ಪೂಜೆ ನಡೆಸುವುದರೊಂದಿಗೆ ಶಿಡ್ಲಘಟ್ಟ ವಿಧಾನಸಭಾ ವ್ಯಾಪ್ತಿಯಲ್ಲಿ ರಥಯಾತ್ರೆ ಮೊದಲುಗೊಳ್ಳಲಿದೆ. ಈ ಸಂದರ್ಭದಲ್ಲಿ ಇಡೀ ಕ್ಷೇತ್ರ ವ್ಯಾಪ್ತಿಯ ಎಲ್ಲಾ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಹಾಜರಿದ್ದು ರಥಯಾತ್ರೆಗೆ ಚಾಲನೆ ನೀಡಬೇಕೆಂದು ಮನವಿ ಮಾಡಿದರು.

 ದೇವರಮಳ್ಳೂರು ಪಂಚಾಯಿತಿ ವ್ಯಾಪ್ತಿಯಿಂದ ನಗರದ ಮಯೂರ ವೃತ್ತದ ಮುಖಾಂತರ ಬಸ್ ನಿಲ್ದಾಣದ ಬಳಿಯ ವೆಂಕಟರಾಯಪ್ಪ ಫ್ಯಾಕ್ಟರಿ ಮುಂಭಾಗದಿಂದ ನಗರದ ಟಿ.ಬಿ ರಸ್ತೆಯಲ್ಲಿ ಮೆರವಣಿಗೆ ಮಾಡಿ ನಗರದ ನಡುವೆ ಸಾರ್ವಜನಿಕ ಸಭೆ ನಡೆಸಲಿದ್ದೇವೆ. ಅಲ್ಲಿಂದ ಮುಂದೆ ಮೆರವಣಿಗೆ ನಡೆಸಿ ಅಬ್ಲೂಡು ವೃತ್ತದಲ್ಲಿ ಸಾರ್ವಜನಿಕ ಸಭೆ ಮಾಡುತ್ತೇವೆ. ಅಲ್ಲಿಂದ ಮುಂದೆ ದಿಬ್ಬೂರಹಳ್ಳಿ ವೃತ್ತದಲ್ಲಿ ಮತ್ತೊಂದು ಸಾರ್ವಜನಿಕ ಸಭೆ ನಡೆಸಲಿದ್ದೇವೆ. ನಂತರ ಸಾದಲಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯವಿರುತ್ತದೆ. ಆ ದಿನ ಜೆಡಿಎಸ್ ಪಕ್ಷದ ಕಾರ್ಯಕರ್ತರು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

 ಸಾದಲಿ, ಎಸ್.ದೇವಗಾನಹಳ್ಳಿ, ಈ.ತಿಮ್ಮಸಂದ್ರ, ದಿಬ್ಬೂರಹಳ್ಳಿ, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಂಡು ಸಾದಲಿ ಗ್ರಾಮದಲ್ಲಿ ನಡೆಯಲಿರುವ ಗ್ರಾಮ ವಾಸ್ತವ್ಯವನ್ನು ಯಶಸ್ವಿಗೊಳಿಸಬೇಕು. ಕ್ಷೇತ್ರದ 246 ಬೂತ್ ಗಳಲ್ಲಿಯೂ ನಮ್ಮ ಪಕ್ಷಕ್ಕಾಗಿ ಕೆಲವು ದಶಕಗಳಿಂದ ದುಡಿದಿರುವ ಹಿರಿಯರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಗೌರವಿಸುವ ಕೆಲಸವನ್ನು ಶ್ರದ್ಧಾಪೂರ್ವಕವಾಗಿ ಮಾಡಲಿದ್ದೇವೆ. ಮೊದಲ ಹಂತದ 110 ಕ್ಷೇತ್ರಗಳಲ್ಲಿ ನಡೆಯಲಿರುವ ಈ ರಥಯಾತ್ರೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ನಡೆಯಲಿರುವ ರಥಯಾತ್ರೆಯು ವಿಶಿಷ್ಟವಾಗಿ, ಇತರರಿಗೆ ಮಾದರಿಯೆನಿಸುವಂತೆ ನಡೆಸಲು ಹಾಗೂ ಪಕ್ಷವನ್ನು ಬಲಪಡಿಸಲು ಶಕ್ತಿ ಮೀರಿ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಶ್ರಮಿಸಬೇಕೆಂದು ವಿನಂತಿಸಿದರು.

   ಆಧುನಿಕವೇ ಶಿಕ್ಷಣ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ನವ ಮತ್ತು ಯುವ ಮಹಿಳಾ ಸಬಲೀಕರಣ, ವಸತಿಯ ಆಸರೆ ಈ 5 ವಿಷಯಗಳು ಪಂಚರತ್ನ ಯೋಜನೆಯ ವೈಶಿಷ್ಟ್ಯವಾಗಿವೆ. ದೇಶದ ಇತಿಹಾಸದಲ್ಲೇ ಯಾರು ಮಾಡದ ಚಿಂತನೆಯನ್ನು ಕುಮಾರಣ್ಣ ಮಾಡಿದ್ದಾರೆ. 2006ರ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಕಾಲೆಳೆಯುವ ಕೆಲಸ ಮಾಡಿತು. 2018ರಲ್ಲಿ ಕಾಂಗ್ರೆಸ್ ಜತೆಯಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರಿಂದ ಕುಮಾರಸ್ವಾಮಿ ಪೂರ್ಣ ಪ್ರಮಾಣದಲ್ಲಿ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ. 2023ರಲ್ಲಿ ಪೂರ್ಣ ಬಹುಮತ ಪಡೆದು ಸ್ವಂತ ಬಲದಿಂದ ಅಧಿಕಾರಕ್ಕೆ ಬಂದು ತನ್ನ ಕಲ್ಪನೆಗಳನ್ನು ಸಾಕಾರಗೊಳಿಸಬೇಕು ಎಂಬುದು ಕುಮಾರಸ್ವಾಮಿ ಗುರಿಯಾಗಿದೆ ಎಂದರು.

 ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, “2023ರ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕ್ರಮಗಳ ವಿವರ, ಮಾಹಿತಿಗಳನ್ನು ನೀಡುವುದು ಪಂಚರತ್ನ ಯೋಜನೆಯ ರಥಯಾತ್ರೆಯಾಗಿದೆ. ತಾಲ್ಲೂಕಿನಲ್ಲಿ ಪಂಚರತ್ನ ಯೋಜನೆಯ ವಾಹನಗಳಿಗೆ ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಬೇಕು. ಯೋಜನೆಯ ವಿವರಗಳನ್ನು ಪ್ರತಿ ಮನೆಗೂ ತಲುಪಿಸಬೇಕು” ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಪ್ರಚಾರವಾಗುತ್ತಿದೆ. ಸಿದ್ದರಾಮಯ್ಯನವರ ಸರ್ಕಾರ ಭಾಗ್ಯಗಳ ಸರ್ಕಾರ ಎಂದು ಜನರನ್ನು ಸೋಮಾರಿಗಳನ್ನಾಗಿ ಮಾಡಿದರು. ಇಂತಹ ಆಡಳಿತಕ್ಕೆ ಕಡಿವಾಣ ಹಾಕಲು ಜೆಡಿಎಸ್ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡರಾದ ಡಿ.ಬಿ.ವೆಂಕಟೇಶ್, ಕೆ.ಲಕ್ಷ್ಮಿನಾರಾಯಣರೆಡ್ಡಿ, ಸಿ.ವಿ.ನಾರಾಯಣಸ್ವಾಮಿ, ಸದಾಶಿವ, ಸಿ.ಎಂ.ಗೋಪಾಲ್, ಗಂಜಿಗುಂಟೆ ಮೂರ್ತಿ, ಎಸ್.ಎಂ.ರಮೇಶ್, ಮುನಿವೆಂಕಟಸ್ವಾಮಿ, ತುಳವನೂರು ರವಿ, ವೆಂಕಟರಾಮರೆಡ್ಡಿ, ತಾದೂರು ರಘು, ಗೊರಮಡುಗು ರಾಮಾಂಜಿ, ತುಮ್ಮನಹಳ್ಳಿ ಸುರೇಂದ್ರ, ಆರ್.ಎ.ಉಮೇಶ್, ಮೇಲೂರು ಮಂಜುನಾಥ್, ಡಾ.ಧನಂಜಯರೆಡ್ಡಿ, ಲಕ್ಷ್ಮೀಪತಿ, ಶಫಿ, ವಿಜಯೇಂದ್ರ, ಬಚ್ಚನಹಳ್ಳಿ ನಾರಾಯಣಸ್ವಾಮಿ, ಡಿ.ಸಿ.ರಾಮಚಂದ್ರ, ಬೈರಸಂದ್ರ ಚಂದ್ರೇಗೌಡ, ರುಕ್ಸಾನಾ, ಕೆ.ಎಸ್.ಮಂಜುನಾಥ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version