Sidlaghatta : ಸದ್ಗುರು ಕೈವಾರದ ಶ್ರೀಯೋಗಿ ನಾರೇಯಣ ತಾತಯ್ಯನವರ 300ನೇ ವರ್ಷದ ಜನ್ಮ ಜಯಂತಿ ಅಂಗವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳು ಸೇರಿ ಎಲ್ಲ ಕಡೆ ತಾತಯ್ಯನವರ ಜೀವನ ಸಾರಾಂಶವನ್ನು ಸಾರುವ ಪ್ರವಚನ ಕಾರ್ಯಕ್ರಮಗಳನ್ನು ಇಡೀ ವರ್ಷಪೂರ್ತಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರವಚನಕಾರ ತಳಗವಾರ ಆನಂದ್ ತಿಳಿಸಿದರು.
ಕೈವಾರದ ಯೋಗಿ ನಾರೇಯಣ ತಾತಯ್ಯನವರ 300ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಇಡೀ ವರ್ಷ ನಡೆಯುವ ಪ್ರವಚನ ಕಾರ್ಯಕ್ರಮಗಳ ಕುರಿತು ಶಿಡ್ಲಘಟ್ಟದಲ್ಲಿ ಬುಧವಾರ ಪ್ರಚಾರ ನಡೆಸಿ ಮಠದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಕೋಟೆ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ಅವರಣದಲ್ಲಿ ಏಪ್ರಿಲ್ 4ರ ಶನಿವಾರದಿಂದ 10ನೇ ತಾರೀಖು ಶುಕ್ರವಾರದವರೆಗೂ ಕೈವಾರ ತಾತಯ್ಯನವರ ಜೀವನ ಸಾರಾಂಶವನ್ನು ಸಾರುವ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪ್ರತಿ ದಿನ ಸಂಜೆ 6.30ರಿಂದ 8 ಗಂಟೆಯವರೆಗೂ ಪ್ರವಚನಕಾರರಾದ ಮಂಕಾಲ ಶ್ರೀಹರಿಶರ್ಮ ಅವರು ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚವನ್ನು ನೀಡಲಿದ್ದಾರೆ ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಕೈವಾರ ತಾತಯ್ಯನವರ ಭಕ್ತರು, ಸಾರ್ವಜನಿಕರು ಸೇರಿ ಪ್ರವಚನ ಕಾರ್ಯಕ್ರಮವನ್ನು ಕೇಳಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಕೋರಿದರು.
ಕೈವಾರ ತಾತಯ್ಯನವರು ಜನಿಸಿ ಪಾಲ್ಗುಣ ಮಾಸದ ಹುಣ್ಣಿಮೆಗೆ 300 ವರ್ಷಗಳಾಗಿವೆ. ತಾತಯ್ಯನವರು ತ್ರಿಕಾಲ ಜ್ಞಾನಿಗಳಾಗಿ, ಧೈವಾಂಶ ಸಂಭೂತರಾಗಿ, ಸಮಾನತೆಯ ತತ್ವ, ಜೀವನದ ಸಾರವನ್ನು ಪ್ರವಚನಗಳ ಮೂಲಕ ಸಾರಿದ ಮಹನೀಯರ ಬದುಕಿನ ಸಾರವನ್ನು ಸಾರುವ ಕೆಲಸ ಆಗಬೇಕಿದೆ ಎಂದರು.
ಮಠದ ಧರ್ಮಾಧಿಕಾರ ಡಾ.ಎಂ.ಆರ್.ಜಯರಾಂ ಅವರ ಆಶಯದಂತೆ ಇಡೀ ವರ್ಷ ಪೂರ್ತಿ ಎರಡೂ ಜಿಲ್ಲೆಗಳ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ವಿಶೇಷ ಉಪನ್ಯಾಸ, ಭಜನೆ, ಆರಾಧನೆ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಮನವಿ ಮಾಡಿದರು.
ಸೋಮೇಶ್ವರಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಎ. ನಾಗರಾಜ್, ಉಪನ್ಯಾಸಕ ವೆಂಕಟರಮಣಪ್ಪ, ಡಾ.ಸತ್ಯನಾರಾಯಣರಾವ್, ಮಠದ ಭಕ್ತರಾದ ಎಸ್.ವಿ.ನಾಗರಾಜ್ರಾವ್, ಮುರಳಿ, ಬಳೆ ರಘು, ಶ್ರೀನಾಥ್, ಮಂಜುನಾಥ್, ಜಗದೀಶ್ ಹಾಜರಿದ್ದರು.








