Sidlaghatta : ರೈತರ ಮುಸುಗಿನಲ್ಲಿ ರೌಡಿಗಳಂತೆ ವರ್ತಿಸುವ ಜೊತೆಗೆ ಅಮಾಯಕ ರೈತರಿಗೆ ಪ್ರಾಣ ಬೆದರಿಕೆ ಹಾಕುತ್ತಿರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಿಪಿಐ ಆನಂದ್ಕುಮಾರ್ ಮೂಲಕ ಗೃಹಸಚಿವರಿಗೆ KIADB ಜಮೀನುಗಳ ಪರ ರೈತರ ಹೋರಾಟ ಸಮಿತಿ ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಮಾರು 13 ಹಳ್ಳಿಗಳ ವ್ಯಾಪ್ತಿಯಲ್ಲಿ ಕೆಐಎಡಿಬಿ ವತಿಯಿಂದ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಿದ್ದು ಇದಕ್ಕೆ ಜಮೀನು ನೀಡಲು ಸಿದ್ದರಿರುವ ರೈತರಿಗೆ ಕೆಲವರು ಕೈಕಾಲು ಮುರಿಯುವ ಹಾಗೂ ಪ್ರಾಣ ಬೆದರಿಕೆ ಹಾಕಿರುವ ಘಟನೆಗೆ ಸಂಬದಿಸಿದಂತೆ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ತಾಲ್ಲೂಕಿನ ಯಣ್ಣಂಗೂರು ಗ್ರಾಮದ ಪ್ರದೀಪ್ ಅವರು ಭೂಮಿಯನ್ನು ಸರ್ಕಾರಿ ಕೈಗಾರಿಕೆಗಳಿಗೆ ನೀಡಿದರೆ ಉತ್ತಮ ಪರಿಹಾರ ಸಿಗುತ್ತದೆ ಎಂದಿದ್ದಕ್ಕೆ ದೂರವಾಣಿಯ ಮೂಲಕ ಕೈಕಾಲು ಮುರಿಯುವುದಾಗ ಬೆದರಿಕೆ ಹಾಕಿರುವುದು, ನಡಿಪಿನಾಯಕನಹಳ್ಳಿ ಗ್ರಾಮದ ರೈತ ಚನ್ನಕೃಷ್ಣಪ್ಪ ಅವರು ತಮ್ಮ ಜಮೀನು ಅಳತೆ ಮಾಡಿಸುವಾಗ ಗುಂಪೊಂದು ಬಂದು ಹಲ್ಲೆ ನಡೆಸಿದ್ದು, ಬಸವಾಪಟ್ಟಣ ಗ್ರಾಮದಲ್ಲಿ ಸರ್ಕಾರಿ ರಸ್ತೆ ಕಾಮಗಾರಿಗೆ ಬಂದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸೇರಿದಂತೆ ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ರೈತರ ಸೋಗಿನಲ್ಲಿ ಪೊಲೀಸರ ಕೊರಳುಪಟ್ಟಿ ಹಿಡಿದು ದೌರ್ಜನ್ಯ ಎಸಗಿರುವ ಆರೋಪಿಗಳ ಮೇಲೆ ಕೂಡಲೇ ಸೂಕ್ತ ಕ್ರಮ ಜರುಗಿಸುವ ಜೊತೆಗೆ ಕೆಐಎಡಿಬಿಗೆ ಭೂಮೀ ನೀಡಲು ಮುಂದಾಗಿರುವ ರೈತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಭಕ್ತರಹಳ್ಳಿ ಪ್ರತೀಶ್, ಮುನೇಗೌಡ, ನವೀನ್ಕುಮಾರ್, ಸುಬ್ರಮಣಿ, ನಾರಾಯಣಸ್ವಾಮಿ, ಪ್ರದೀಪ್ ಹಾಜರಿದ್ದರು.








