Malamachanahalli, Sidlaghatta, chikkaballapur : ಗ್ರಾಮೀಣ ಜೀವನದ ಪ್ರಮುಖ ಆಧಾರವಾದ ಹೈನುಗಾರಿಕೆಯನ್ನು ಕ್ರಮಬದ್ಧ ಮತ್ತು ವೈಜ್ಞಾನಿಕ ರೀತಿಯಲ್ಲಿ ನಡೆಸಿದರೆ ಮಾತ್ರ ಸ್ಥಿರ ಲಾಭ ದೊರೆಯುತ್ತದೆ. ಇಲ್ಲವಾದಲ್ಲಿ ನಷ್ಟಗಳ ಸರಮಾಲೆಯೇ ಎದುರಾಗುತ್ತದೆ ಎಂದು ಕೆಎಂಎಫ್ ನಿವೃತ್ತ ವ್ಯವಸ್ಥಾಪಕ ಡಾ. ರಾಘವನ್ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಆಯೋಜಿಸಲಾದ ಪಶು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಗ್ರಾಮೀಣರು ಹೈನುಗಾರಿಕೆಯಿಂದಲೇ ತಮ್ಮ ದಿನನಿತ್ಯದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ. ಆದರೆ ಜಾನುವಾರುಗಳಿಗೆ ತಗುಲುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಚಿತ ಎಚ್ಚರಿಕೆ ಇರದಿದ್ದರೆ, ಅದರಿಂದ ಉಂಟಾಗುವ ನಷ್ಟ ಅತೀವ ಗಂಭೀರವಾಗಿರುತ್ತದೆ. ಹೀಗಾಗಿ ಉಚಿತ ಪಶು ಆರೋಗ್ಯ ಶಿಬಿರಗಳನ್ನು ರೈತರು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಅವರು ಸಲಹೆ ನೀಡಿದರು.
ಶಿಬಿರದಲ್ಲಿ ಫಲಕಚ್ಚದ, ಗೊಡ್ಡು ಬೀಳುವ ರಾಸುಗಳು, ಗರ್ಭಕೋಶದ ತೊಂದರೆಗಳು, ಮತ್ತು ಪೌಷ್ಠಿಕ ಕೊರತೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ರೈತರಿಗೆ ಪಶುಪಾಲನಾ ಕ್ರಮಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಒಟ್ಟು 50ಕ್ಕೂ ಹೆಚ್ಚು ರಾಸುಗಳಿಗೆ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ರವಿಕಿರಣ್ (ಶಿಡ್ಲಘಟ್ಟ ಶಿಬಿರ ಕಚೇರಿ ವ್ಯವಸ್ಥಾಪಕ), ಡಾ. ಹರೀಶ್, ವಿಸ್ತರಣಾಧಿಕಾರಿ ಶ್ರೀನಿವಾಸ್, ಎಂ. ವಿನಯ್ (ಕಾರ್ಯನಿರ್ವಹಣಾಧಿಕಾರಿ), ಮಾಜಿ ಅಧ್ಯಕ್ಷ ರಾಮಚಂದ್ರಾಚಾರಿ, ಕೇಶವಮೂರ್ತಿ, ಮತ್ತು ಡೈರಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.







