Melur, sidlaghatta : ಜಿಲ್ಲೆಯಲ್ಲೇ, ಹೆಚ್ಚು ಶಿಕ್ಷಕರನ್ನು ಹೊಂದಿರುವ, ಶಿಕ್ಷಣ ಪ್ರೇಮಿಗಳ ಗ್ರಾಮ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹೆಚ್ಚು ಪ್ರೀತಿಸುವ ಗ್ರಾಮ ಎಂಬ ಖ್ಯಾತಿಯನ್ನು ಗಳಿಸಿಕೊಂಡಿರುವ, ಮೇಲೂರು ಗ್ರಾಮದಲ್ಲಿ, ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಸಂಭ್ರಮ ಮನೆ ಮಾಡಿದೆ. ಮೇ 9 ಮತ್ತು 10 ರಂದು, ಗ್ರಾಮದ ಕಿರಿಯ ಮತ್ತು ಹಿರಿಯ ವಾಲಿಬಾಲ್ ಆಟಗಾರರ ನೆನಪಿಗಾಗಿ ಹೊನಲು ಬೆಳಕಿನ ಪಂದ್ಯಾವಳಿಗಳು ಆಯೋಜನೆಗೊಂಡಿವೆ.
ಮೇಲೂರು ಗ್ರಾಮದಲ್ಲಿ, ಹಿಂದಿನಿಂದಲೂ, ಹಿರಿಯರು ಕ್ರೀಡಾಕೂಟಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಯುವಪೀಳಿಗೆ ದೈಹಿಕವಾಗಿ, ಮಾನಸಿಕವಾಗಿ ಸಢೃರಾಗಿರಬೇಕಾದರೆ, ದುಶ್ಚಟಗಳಿಂದ ದೂರ ಉಳಿಯಬೇಕಾದರೆ, ಕ್ರೀಡೆಗಳು ಮಹತ್ತರವಾದ ಪಾತ್ರ ವಹಿಸುತ್ತವೆ ಎನ್ನುವ ಅಂಶವನ್ನು ಮನಗಂಡಿದ್ದ ಹಿರಿಯರು, ವಾಲಿಬಾಲ್ ಪಂದ್ಯಾವಳಿಗಳು, ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ನಡೆಸುತ್ತಿದ್ದರು. ಇದರ ಫಲವಾಗಿ ಮೇಲೂರು ಗ್ರಾಮದ ಹಿರಿಯ ವಾಲಿಬಾಲ್ ಆಟಗಾರರಾದ ಡಿ.ಮುನಿಶಾಮಯ್ಯ ಹಾಗೂ ಅಶೋಕ್ ಅವರು, ವಾಲಿಬಾಲ್ ಪಂದ್ಯಾವಳಿಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಡಿ, ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಸರ್ಕಾರಿ ನೌಕರರ ಸಂಘದಿಂದ ಮೇಲೂರು ಗ್ರಾಮದ ಹಿರಿಯ ವಾಲಿಬಾಲ್ ಕ್ರೀಡಾಪಟು ಎಸ್.ಎನ್.ಪಾರ್ಥಸಾರಥಿ ಅವರು, ಎರಡು ಬಾರಿ ರಾಜ್ಯ ಮಟ್ಟದಲ್ಲಿ ವಿಜೇತರಾಗಿ, ಒಂದು ಬಾರಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದರು. ಇವೆಲ್ಲರ ಸಹಯೋಗದಲ್ಲಿ, 18 ವರ್ಷಗಳ ನಂತರ, ಈಗ, ಯುವಕರಲ್ಲಿ ಅದೇ ಉತ್ಸಾಹವನ್ನು ತುಂಬಿಸುವುದಕ್ಕಾಗಿ, ಮೇ.9 ಮತ್ತು 10 ರಂದು ಹಿರಿಯ ಮತ್ತು ಕಿರಿಯ ವಾಲಿಬಾಲ್ ಆಟಗಾರರ ಜ್ಞಾಪಕಾರ್ಥ ಜೈ ಕರ್ನಾಟಕ ವಾಲಿಬಾಲ್ ಸಂಸ್ಥೆಯ ಇವರ ಆಶ್ರಯದಲ್ಲಿ ಸರ್ಕಾರಿ, ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ.
ರಾತ್ರಿಯ ವೇಳೆ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟಗಳ ಆಯೋಜನೆ ಹಾಗೂ ಅದನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರುವುದು ತುಂಬಾ ಕಷ್ಟದ ಕೆಲಸವಾದರೂ, ಗ್ರಾಮದ ಹಿರಿಯ ಆಟಗಾರರು, ಯುವಮುಖಂಡರುಗಳೆಲ್ಲರ ಸಹಯೋಗದಲ್ಲಿ, ಅದ್ದೂರಿಯಾಗಿ ಆಯೋಜನೆ ಮಾಡಲಾಗಿದೆ.
ಸುಮಾರು 20 ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು, ಶಾಸಕ ಬಿ.ಎನ್.ರವಿಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸಿ, ಅಂತರಾಷ್ಟ್ರೀಯ ಪವರ್ ಲಿಪ್ಟಿಂಗ್ ಆಟಗಾರ ಎಂ.ವಿ.ವಜ್ರಲ್ ಗೌಡ, ಅಂತರಾಷ್ಟ್ರೀಯ ಟೆನ್ನಿಸ್ ಆಟಗಾರ ಪುನೀತ್ ಮನೋಹರ್ ಸೇರಿದಂತೆ ಸ್ಥಳೀಯ ಮುಖಂಡರು ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.








