Sidlaghatta : ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಕ್ರೂರ ದಾಳಿಯನ್ನು ಖಂಡಿಸಿ, ಶಿಡ್ಲಘಟ್ಟ ಕೋಟೆ ವೃತ್ತದಲ್ಲಿ ಮೌನ ಪ್ರತಿಭಟನೆ ಮತ್ತು ಮೋಂಬತ್ತಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಭಜರಂಗದಳ, ಬಿಜೆಪಿ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತರಿಗೆ ಮೋಂಬತ್ತಿ ಬೆಳಗಿ ಶ್ರದ್ಧಾಂಜಲಿ ಅರ್ಪಿಸಿ, ನಂತರ ಮೌನ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸೀಕಲ್ ಆನಂದಗೌಡ ಮಾತನಾಡಿ, “ಪಾಕಿಸ್ತಾನ ಪ್ರೇರಿತ ಉಗ್ರರು ಮಕ್ಕಳ ಮುಂದೆ ತಂದೆ-ತಾಯಿಯರನ್ನು ಕೊಂದಿರುವ ಘಟನೆ ಮಾನವತೆಗೆ ತಲೆತಗ್ಗಿಸುವಂತದ್ದು. ಈ ದೌರ್ಜನ್ಯವನ್ನು ಜಾತಿ, ಧರ್ಮವನ್ನೆಲ್ಲ ಮೀರಿಸಿ ಪ್ರತಿಯೊಬ್ಬರು ಖಂಡಿಸುತ್ತಾರೆ,” ಎಂದರು.
ಇಂತಹ ಘಟನೆಗಳು ಮರುಕಳಿಸದಂತೆ ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದೂಪರ ಸಂಘಟನೆಗಳ ಮುಖಂಡರು ಸುರೇಂದ್ರಗೌಡ, ರೂಪಸಿ ರಮೇಶ್, ಹಾಗೂ ಸ್ಥಳೀಯ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.