ಶಿಡ್ಲಘಟ್ಟ ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ವಿದ್ಯಾರ್ಥಿಗಳು ಪಾರ್ಥೇನಿಯಂ ಕಳೆ ನಿಯಂತ್ರಣ ಕುರಿತು ರೈತರು ಮತ್ತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಗ್ರಾಮದಲ್ಲಿ ವಾಸ್ತವ್ಯ ಹೂಡಿ ರೈತರು ಹಾಗೂ ಗ್ರಾಮಸ್ಥರಿಗೆ ಕೃಷಿ, ಪರಿಸರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ.
ಇದರ ಭಾಗವಾಗಿ ಭಾನುವಾರ ಪಾರ್ಥೇನಿಯಂ ಜಾಗೃತಿ ವಾರ ಆಚರಿಸಲಾಯಿತು. ಪಾರ್ಥೇನಿಯಂ ಕಳೆಗಿಡದಿಂದ ಕೃಷಿ ಬೆಳೆಗಳು, ಪರಿಸರ ಹಾಗೂ ಮಾನವನ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಲಾಯಿತು.
ಪಾರ್ಥೇನಿಯಂ ಕಳೆ ಕೃಷಿ ಜಮೀನು, ಖಾಲಿ ಪ್ರದೇಶ, ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವೇಗವಾಗಿ ಹರಡುತ್ತದೆ. ಕೃಷಿ ಭೂಮಿಯಲ್ಲಿ ಇದು ಹೆಚ್ಚಾಗಿ ಬೆಳೆದರೆ ಬೆಳೆಗಳೊಂದಿಗೆ ನೀರು, ಪೋಷಕಾಂಶ ಮತ್ತು ಜಾಗಕ್ಕಾಗಿ ಸ್ಪರ್ಧಿಸುವುದರಿಂದ ಬೆಳೆಗಳ ಬೆಳವಣಿಗೆ ಹಾಗೂ ಇಳುವರಿ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಕಳೆಗಿಡದ ಪರಾಗ ಮತ್ತು ಸಸ್ಯದ ಸಂಪರ್ಕದಿಂದ ಕೆಲವರಲ್ಲಿ ಅಲರ್ಜಿ ಹಾಗೂ ಚರ್ಮದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಇದರ ನಿಯಂತ್ರಣ ಅಗತ್ಯವಾಗಿದೆ ಎಂದು ಹೇಳಿದರು.
ಹೂವು ಮತ್ತು ಬೀಜಗಳು ಮೂಡುವ ಮುನ್ನವೇ ಪಾರ್ಥೇನಿಯಂ ಕಳೆ ಕಿತ್ತು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಕೃಷಿ ಜಮೀನು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಂಡು ಆರಂಭದಲ್ಲಿಯೇ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಕೆಎಂಎಫ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ, ಗ್ರಾಮಸ್ಥರಾದ ಚನ್ನರಾಯಪ್ಪ, ಸಂತೋಷ್, ಅರುಣ್ ಹಾಗೂ ಜಿಕೆವಿಕೆ ವಿದ್ಯಾರ್ಥಿಗಳಾದ ಪೂಜಾ, ಲಕ್ಷ್ಮೀ, ಮಾದೇಶ, ಮಾಳವಿಕ, ರಾಹುಲ್, ಸಂದೀಪ್, ಪ್ರಜ್ವಲ್ ಮತ್ತು ಪವನ್ ಇದ್ದರು.
ಇದೇ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಜಿಕೆವಿಕೆ ವಿದ್ಯಾರ್ಥಿಗಳು ತಾಲ್ಲೂಕಿನ ಗ್ರಾಮೀಣ ಮಹಿಳೆಯರಿಗೆ ಬೇಕರಿ ಉತ್ಪನ್ನ ತಯಾರಿಕಾ ತರಬೇತಿ ಸಹ ನೀಡಿದ್ದರು.
In English: Students from GKVK (Bengaluru Agricultural University’s Gandhi Krishi Vignana Kendra) raised awareness among farmers and residents of K. Muttukadahalli village in Sidlaghatta taluk about controlling Parthenium weed, as part of a Parthenium Awareness Week held during their three-month Rural Agricultural Work Experience Programme. Students explained that the weed spreads rapidly on farmland, roadsides and public spaces, competes with crops for water, nutrients and space affecting yields, and can cause allergies and skin problems through contact with its pollen. They advised uprooting and properly disposing of the plant before it flowers and seeds, and maintaining clean farmland to prevent early spread.







