Sidlaghatta : ಶಿಡ್ಲಘಟ್ಟ ನಗರ ಪ್ರದೇಶದಲ್ಲಿ ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ಆಚರಿಸಲು ಮಂಗಳವಾರ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಡಿವೈಎಸ್ಪಿ ಮುರಳೀಧರ್ ಮಾತನಾಡಿ, ಶಿಡ್ಲಘಟ್ಟದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದೀರ್ಘಕಾಲದಿಂದ ಸಹಬಾಳ್ವೆ ಇದೆ. ಈ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸ್ ಭದ್ರತೆಗೆ ಅಗತ್ಯವಿಲ್ಲ. ಕೇವಲ ಟ್ರಾಫಿಕ್ ನಿರ್ವಹಣೆಯ ಉದ್ದೇಶದಿಂದ ಪೊಲೀಸರು ದೈಹಿಕವಾಗಿ ಹಾಜರಿರುತ್ತಾರೆ ಎಂದು ತಿಳಿಸಿದರು.
ಹಬ್ಬದಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯುವ ಕಾರಣ, ಕೆಲವೆಡೆ ವಾಹನ ಸಂಚಾರದಲ್ಲಿ ಅಲ್ಪ ಬಿಕ್ಕಟ್ಟು ಸಂಭವಿಸಬಹುದು. ಆದ್ದರಿಂದ ಯಾವುದೇ ಭಾವನಾತ್ಮಕ ಪ್ರತಿಕ್ರಿಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮುದಾಯದ ಹಿರಿಯರು ತ್ರಿಬಲ್ ರೈಡಿಂಗ್ ಮತ್ತು ವೇಗದ ಚಾಲನೆ ತಪ್ಪಿಸುವಂತೆ ಸಮುದಾಯಕ್ಕೆ ಮನವಿ ಮಾಡಬೇಕು. ಪ್ರಾರ್ಥನೆ ಬಳಿಕ ಮನೆಗೆ ಹಿಂದಿರುಗುವಾಗ ಜನವಸತಿಗಳಲ್ಲಿ ನಿಧಾನವಾಗಿ ಹಾಗೂ ಜವಾಬ್ದಾರಿಯಿಂದ ಚಾಲನೆ ಮಾಡಬೇಕು .
ಎಲ್ಲಾ ಧರ್ಮದವರು ಪರಸ್ಪರ ಗೌರವ ಮತ್ತು ಸಹಬಾಳ್ವೆಯಿಂದ ಹಬ್ಬಗಳನ್ನು ಆಚರಿಸಬೇಕು. ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ, ಯಾವುದೇ ರೀತಿಯ ಗೊಂದಲ ಅಥವಾ ಅಶಾಂತಿಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಸರ್ಕಲ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ಮಾತನಾಡಿ, ಮೆರವಣಿಗೆ ಅಥವಾ ಸಮೂಹ ಸಮಾರಂಭಗಳ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಅತ್ಯವಶ್ಯ. ಎಲ್ಲ ಧರ್ಮದವರು ಶಿಸ್ತು ಹಾಗೂ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು. ಟ್ರಾಫಿಕ್ ನಿರ್ವಹಣೆ, ಮಾರ್ಗಸೂಚಿಗಳ ಪಾಲನೆ ಮತ್ತು ಪ್ರಾರ್ಥನೆ ಸ್ಥಳಗಳಲ್ಲಿ ಸರಿಯಾದ ವ್ಯವಸ್ಥೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಜಮೀಯ ಮಸೀದಿ ಸುತ್ತಮುತ್ತ ವಾಹನ ನಿಲ್ಲಿಸುವ ಕುರಿತು ನಿರ್ದಿಷ್ಟ ಮಾರ್ಗಸೂಚಿ ನೀಡಲಾಗಿದೆ. ಸಾರ್ವಜನಿಕರು ಪೊಲೀಸ್ ಸೂಚನೆ ಪಾಲಿಸಿ, ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂಬದು ನಮ್ಮ ಆಶಯ ಎಂದು ತಿಳಿಸಿದರು.
ಸಭೆಯಲ್ಲಿ ಪಿ.ಎಸ್.ಐ ವೇಣುಗೋಪಾಲ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಗಣ್ಯರು ಮತ್ತು ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.