Dibburahalli, Sidlaghatta : ಬ್ಯಾಂಕಿನ ಅಧಿಕಾರಿ, ಸಿಬ್ಬಂದಿಯು ಯಾವುದೆ ಕಾರಣಕ್ಕೂ ಗ್ರಾಹಕರಿಗೆ ನಿಮ್ಮ ಖಾತೆಯ ವಿವರಗಳನ್ನು ಕೇಳಲು ಮೊಬೈಲ್ ಕರೆ ಮಾಡುವುದಿಲ್ಲ. ಓಟಿಪಿ ಸಂಖ್ಯೆಯನ್ನಾಗಲಿ ಕೇಳುವುದಿಲ್ಲ. ಯಾರಿಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕೊಡಬೇಡಿ ಎಂದು ದಿಬ್ಬೂರಹಳ್ಳಿ ಠಾಣೆಯ ತನಿಖಾಧಿಕಾರಿ ಟಿ.ವೆಂಕಟರಮಣ ಅವರು ಸಾರ್ವಜನಿಕರಿಗೆ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಿಬ್ಬೂರಹಳ್ಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರಿಗೆ ಸೈಬರ್ ಅಪರಾಧ ಹಾಗೂ ವಂಚನೆಗಳ ಬಗ್ಗೆ ಅರಿವು ಮೂಡಿಸಿ ಅವರು ಮಾತನಾಡಿದರು.
ಯಾವುದೆ ಬ್ಯಾಂಕಿನ ಅಧಿಕಾರಿಗಳು ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಯಾವುದೆ ಮಾಹಿತಿಯನ್ನು ಕೇಳಿ ಕರೆ ಮಾಡುವುದಿಲ್ಲ. ನಿಮ್ಮ ಖಾತೆ ಬ್ಲಾಕ್ ಆಗಿದೆ. ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದೆಲ್ಲಾ ಕರೆ ಬಂದರೆ ಅದನ್ನು ನಂಬಬೇಡಿ ಎಂದರು.
ಗ್ರಾಮೀಣ ಭಾಗದಲ್ಲಿ ಓದಲು ಬರೆಯಲು ಬಾರದವರನ್ನು ವಂಚಿಸುವವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಂತಹ ಖದೀಮರು ಬ್ಯಾಂಕ್ ಬಳಿ ತಿರುಗಾಡುತ್ತಾ ಅನಕ್ಷರಸ್ಥರು ಮತ್ತು ಅಮಾಯಕರು ಬಂದಾಗ ನಿಮಗೆ ಚೆಕ್ ಬರೆದುಕೊಟ್ಟು ಹಣ ಡ್ರಾ ಮಾಡಿ ಕೊಟ್ಟು ಸಹಾಯ ಮಾಡುವವರಂತೆ ನಟಿಸುತ್ತಾರೆ.
ಚಿನ್ನಾಭರಣವನ್ನು ಅಡವಿಡುವ ಸಮಯದಲ್ಲೂ ನಿಮಗೆ ಸಹಾಯ ಮಾಡುವಂತೆ ನಟಿಸಿ ನಿಮ್ಮ ಚಿನ್ನಾಭರಣವನ್ನು ಅದಲು ಬದಲು ಮಾಡಿ ಮೋಸ ಮಾಡುತ್ತಾರೆ. ಹಾಗಾಗಿ ಬ್ಯಾಂಕ್ ಬಳಿ ನಿಮಗೆ ಪರಿಚಯ ಇಲ್ಲದರವ ಬಳಿ ಯಾವುದೆ ಕಾರಣಕ್ಕೂ ಹಣ ಡ್ರಾ ಮಾಡಿಸಿಕೊಡುವಂತೆ, ಚಿನ್ನಾಭರಣ ಅಡ ಇಟ್ಟು ಹಣ ಕೊಡಿಸುವಂತೆ ಕೇಳಿ ಮೋಸ ಹೋಗಬೇಡಿ ಎಂದು ಅರಿವು ಮೂಡಿಸಿದರು.
ಸೈಬರ್ ಅಪರಾಧಿಗಳು ನಡೆಸುವ ಸಂಚು, ಅದರಿಂದ ಆಗುವ ಅನಾಹುತಗಳು, ಬ್ಯಾಂಕ್ ಬಳಿ ಸಹಾಯ ಮಾಡುವಂತೆ ನಟಿಸುವ ಆಗುಂತಕರಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಿದರು. ಅಪರಾಧ ವಿಭಾಗದ ಪೇದೆ ಕೃಷ್ಣ ಹಾಜರಿದ್ದರು.