Sidlaghatta : ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಯಾವುದೇ ಅಡೆತಡೆಗಳಿಲ್ಲದೆ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿ, ಎಬಿಡಿ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ರಾಜೀವ್ಗೌಡ ಅವರು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ಮುಡಿ ನೀಡುವುದಾಗಿ ತಿಮ್ಮಪ್ಪನಿಗೆ ಈ ಹಿಂದೆ ರಾಜೀವ್ಗೌಡ ಅವರು ಹರಕೆ ಹೊತ್ತಿದ್ದರು. ಅದರಂತೆ ಗುರುವಾರ ತಮ್ಮ ಕುಟುಂಬ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ತಿರುಪತಿಯ ಮೆಟ್ಟಿಲುಗಳನ್ನು ಹತ್ತಿ, ಶ್ರೀನಿವಾಸನಿಗೆ ಕೇಶ ಮುಡಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವಿ.ರಾಜೀವ್ಗೌಡ, “ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದನ್ನು ನೋಡಬೇಕೆಂಬುದು ರಾಜ್ಯದ ಕೋಟ್ಯಂತರ ಯುವಕರು, ಬೆಂಬಲಿಗರು ಹಾಗೂ ರಾಜಕಾರಣಿಗಳ ಕನಸಾಗಿದೆ. ದೇಶದ ಕಾಂಗ್ರೆಸ್ಗೆ ಆಪತ್ಕಾಲ ಬಂದಾಗ ಬಂಡೆಯಂತೆ ನಿಂತು ಪಕ್ಷವನ್ನು ರಕ್ಷಿಸಿದ ರಾಜಕೀಯ ಚಾಣಕ್ಯ, ಟ್ರಬಲ್ ಶೂಟರ್ ಹಾಗೂ ಪಕ್ಷನಿಷ್ಠರಾದ ಡಿಕೆಶಿಯವರಿಗೆ ಮುಖ್ಯಮಂತ್ರಿ ಪಟ್ಟ ಸಿಗಲಿ ಎಂದು ತಿಮ್ಮಪ್ಪನಲ್ಲಿ ಬೇಡಿಕೊಂಡಿದ್ದೇನೆ,” ಎಂದು ತಿಳಿಸಿದರು.
ಮುಂದುವರಿದು ಮಾತನಾಡುತ್ತಾ, “ಆ ಅಪರೂಪದ ಕ್ಷಣಗಳು ಹತ್ತಿರವಾಗುತ್ತಿದ್ದು, ಯಾವುದೇ ವಿಘ್ನಗಳು ಎದುರಾಗದಂತೆ ಅವರು ಮುಖ್ಯಮಂತ್ರಿಯಾಗಲೆಂದು ಈ ಪೂಜೆ ಸಲ್ಲಿಸಿದ್ದೇನೆ. ಡಿ.ಕೆ.ಶಿವಕುಮಾರ್ ಅವರ ಅವಧಿಯಲ್ಲಿ ಬೆಂಗಳೂರು ‘ಗ್ರೇಟರ್ ಬೆಂಗಳೂರು’ ಆಗಿ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ. ಅವರ ಆಡಳಿತದಲ್ಲಿ ರಾಜ್ಯವು ‘ಗ್ರೇಟರ್ ಕರ್ನಾಟಕ’ವಾಗಲಿ ಎಂದು ಆಶಿಸುತ್ತೇನೆ,” ಎಂದು ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ಗೌಡ, ಕಾಂಗ್ರೆಸ್ ಮುಖಂಡ ವರದಣ್ಣ ಸೇರಿದಂತೆ ಹಲವು ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.








