Sidlaghatta : ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಮೂರನೇ ಶನಿವಾರದ ಪ್ರಯುಕ್ತ ತಾಲ್ಲೂಕು ಸವಿತಾ ಸಮಾಜ ಸಂಘದ ವತಿಯಿಂದ ದೇವರಿಗೆ ವಿಶೇಷ ಪೂಜೆ ಹಾಗೂ ಬೆಳ್ಳಿ ರಥೋತ್ಸವದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆಯಿಂದಲೂ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ,ಮಹಾಮಂಗಳಾರತಿ ಪ್ರಸಾದ ವಿನಿಯೋಗವನ್ನು ಮಾಡಲಾಯಿತು. ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಶ್ರಾವಣ ಶನಿವಾರ ಪ್ರಯುಕ್ತ ದೇವರಿಗೆ ಮಾಡಿದ್ದ ವಿಶೇಷ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತಿತ್ತು. ದೇವರ ಬೆಳ್ಳಿ ರಥೋತ್ಸವವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇವರ ಮೆರವಣಿಗೆಯಲ್ಲಿ ಸವಿತಾ ಸಮಾಜದವರು ನಾದಸ್ವರ ಮತ್ತು ಡೋಲು ವಾದನಗಳನ್ನು ನಡೆಸಿಕೊಟ್ಟರು.
ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಎಚ್.ನಾರಾಯಣಸ್ವಾಮಿ, ಮುಖಂಡರಾದ ಟಿ.ಮುನಿಸ್ವಾಮಿ, ಟಿ.ಕೃಷ್ಣಪ್ಪ ಹಾಗು ಸಮುದಾಯದ ಮುಖಂಡರು ಭಾಗವಹಿಸಿದ್ದರು.








