Sidlaghatta : ನಗರದಲ್ಲಿ ಶ್ರೀ ರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳನ್ನು ಕಡೆಗಣಿಸಿರುವುದಕ್ಕೆ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಅಧ್ಯಕ್ಷ ವಿ. ಚೆಲುವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಳೆದ ಮೂರು ವರ್ಷಗಳಿಂದ ವಿಹಿಂಪ ಮತ್ತು ಭಜರಂಗದಳದ ನೇತೃತ್ವದಲ್ಲಿ ಶೋಭಾಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಈಗ ಟ್ರಸ್ಟ್ ಮೂಲಕ ಶೋಭಾಯಾತ್ರೆ ಆಯೋಜಿಸುತ್ತಿರುವುದು ಸ್ವಾಗತಾರ್ಹವೇ ಆದರೂ, ಹಿಂದೂಪರ ಸಂಘಟನೆಗಳ ಮುಖಂಡರಿಗೆ ಕನಿಷ್ಠ ಸೌಜನ್ಯಕ್ಕಾದರೂ ಆಹ್ವಾನ ನೀಡದಿರುವ ಹಿಂದಿನ ಮರ್ಮವೇನು?” ಎಂದು ಪ್ರಶ್ನಿಸಿದರು.
“ಈ ಟ್ರಸ್ಟ್ನ ಅಧ್ಯಕ್ಷರು ಹಿಂದೆಯೂ ನಮ್ಮೊಂದಿಗೆ ಕಾರ್ಯನಿರ್ವಹಿಸಿದ್ದರು. ಇದೀಗ ಹೊಸದಾಗಿ ಟ್ರಸ್ಟ್ ಸ್ಥಾಪಿಸಿ ಶೋಭಾಯಾತ್ರೆ ಮಾಡುತ್ತಿದ್ದಾರೆ, ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಹಿಂದೂ ಧರ್ಮದ ಆಚರಣೆಗಳನ್ನು ಟೀಕಿಸುವ ಕಾಂಗ್ರೆಸ್ ಮುಖಂಡರಿಗೆ ಆಹ್ವಾನ ನೀಡುವವರು, ಹಿಂದೂ ಸಂಘಟನೆಗಳ ಮುಖಂಡರನ್ನು ಕಡೆಗಣಿಸಿರುವುದು ಬೇಸರ ತಂದಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಹಕಾರದ ಭರವಸೆ:
ವಿವಾದಗಳ ಹೊರತಾಗಿಯೂ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ವಿಹಿಂಪ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದ ಚೆಲುವರಾಜ್, “ನಾವು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ, ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯಗಳು ಮರುಕಳಿಸಬಾರದು ಎಂಬುದಷ್ಟೇ ನಮ್ಮ ಉದ್ದೇಶ,” ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ವಿಹಿಂಪ ಕಾರ್ಯದರ್ಶಿ ಡಿ.ಆರ್. ನಾರಾಯಣಸ್ವಾಮಿ, ಕಾರ್ಯಕರ್ತರಾದ ಮಂಜುನಾಥ್ ಮತ್ತು ಪ್ರಕಾಶ್ ಉಪಸ್ಥಿತರಿದ್ದರು.








