Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಇಂದು ಆಧ್ಯಾತ್ಮಿಕ ಸೌರಭ ಪಸರಿಸಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣಪತಿ ಪೂಜೆ ಹಾಗೂ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಉಪನ್ಯಾಸ ನೀಡಿದ ಶರಣ ಚಿಂತಕ ಚಂದ್ರಶೇಖರ ಹಡಪದ್ ಅವರು, ಇಂದಿನ ಧಾವಂತದ ಬದುಕಿನಲ್ಲಿ ಮನುಷ್ಯನಿಗೆ ಆಧ್ಯಾತ್ಮಿಕತೆ ಎಷ್ಟು ಅಗತ್ಯ ಎಂಬುದನ್ನು ವಿವರಿಸಿದರು. “ಧರ್ಮ ಎಂದರೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ, ಅದು ಸಕಲ ಜೀವರಾಶಿಗಳ ಒಳಿತನ್ನು ಬಯಸುವ ಮಾರ್ಗ. ಧಾರ್ಮಿಕ ಚಿಂತನೆಗಳು ನಮಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುತ್ತವೆ, ಇದು ಸುಂದರ ಕುಟುಂಬ ನಿರ್ವಹಣೆಗೆ ಸಹಕಾರಿ,” ಎಂದು ಅವರು ತಿಳಿಸಿದರು.
ಮನುಷ್ಯ ಮೌಲ್ಯಗಳನ್ನು ಉಳಿಸಿಕೊಳ್ಳಲು ಆಧ್ಯಾತ್ಮಿಕ ಮಾರ್ಗದರ್ಶನ ಮುಖ್ಯ. ವಿವಿಧ ಧರ್ಮಗಳ ನಡುವೆ ಸಂವಾದ ಮತ್ತು ಸಾಮರಸ್ಯ ಉಂಟಾದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ನುಡಿದರು.








