Sidlaghatta : ಶಿಡ್ಲಘಟ್ಟ ನಗರದ ಶ್ರೀ ಶಾರದಾ ವಿದ್ಯಾಸಂಸ್ಥೆಯಲ್ಲಿ ಶನಿವಾರ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಈಶ್ವರಸಿಂಗ್, ಪಂಚದಲ್ಲಿ ಯಾರೊಬ್ಬರೂ ಕದಿಯಲಾರದ ಆಸ್ತಿ ಎಂದರೆ ಅದು ಶಿಕ್ಷಣ ಮಾತ್ರ, ಹಾಗಾಗಿ ಮಕ್ಕಳಿಗೆ ಬೇರೆ ಆಸ್ತಿಯನ್ನು ಮಾಡುವುದು ಬೇಡ, ಬದಲಿಗೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ತಿಳಿಸಿದರು
ಪ್ರತಿಯೊಂದು ಮಗುವಿನಲ್ಲಿಯೂ ತನ್ನದೇ ಆದ ಪ್ರತಿಭೆಯಿರುತ್ತದೆ, ಮಗುವಿನಲ್ಲಿರುವ ಪ್ರತಿಭೆಯನ್ನು ಉತ್ತಮ ಹಾಗೂ ಸನ್ಮಾರ್ಗದ ದಾರಿ ತೋರಿದಾಗ ಮಾತ್ರ ಆ ಮಗುವು ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ. ಹಾಗಾಗಿ ಮನೆಯಲ್ಲಿ ಪೋಷಕರು ಮಕ್ಕಳಿಗೆ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು ಎಂದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಬಹಳಷ್ಟು ಮಹತ್ತರವಾದದ್ದು ಹಾಗಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ಸಹಕಾರವನ್ನು ಪೋಷಕರು ಶಿಕ್ಷಕರಿಗೆ ನೀಡಬೇಕು ಎಂದರು.
ಶ್ರೀ ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್.ಮುನಿರತ್ನಂ ಮಾತನಾಡಿ, ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವಂತಹ ಗುರಿ ಸೇರಿದಂತೆ ದೇಶದ ಯಾವುದೇ ಮೂಲೆಯಲ್ಲಿಯಾದರೂ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವಂತಹ ಸಾಮರ್ಥ್ಯವುಳ್ಳವರನ್ನಾಗಿ ಮಾಡುವ ಧ್ಯೇಯವನ್ನು ವಿದ್ಯಾ ಸಂಸ್ಥೆ ಹೊಂದಿದೆ. ಪ್ರತಿಯೊಬ್ಬ ಮಗುವೂ ಹೆತ್ತ ತಾಯಿ ತಂದೆಯರನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ವಾರ್ಷಿಕೋತ್ಸವ ಮಕ್ಕಳು ಮಾಡಿದ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೆಳೆಯುವಂತಿತ್ತು.
ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್.ಮುನಿರತ್ನಂ, ಕಾರ್ಯದರ್ಶಿ ಶ್ರೀಕಾಂತ್, ವ್ಯವಸ್ಥಾಪಕ ನಿರ್ದೇಶಕಿ ವಂದನಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಕುಮಾರ್.ಎ, ಎ.ಆರ್.ಎಂ ಪಿಯು ಕಾಲೇಜಿನ ಪ್ರಾಂಶುಪಾಲ ಮೂರ್ತಿ ಸಾಮ್ರಾಟ್, ಮುಖ್ಯಶಿಕ್ಷಕರಾದ ರಾಜೇಶ್, ಸಿದ್ಧರಾಜು, ಎಂ.ಆರ್.ರಾಘವೇಂದ್ರ ಸಿಬ್ಬಂದಿ ಮತ್ತು ಮಕ್ಕಳು ಹಾಜರಿದ್ದರು.








