Sidlaghatta : ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರು ಶಾಲೆಯಿಂದ ಹೊರಗುಳಿಯುವ ಅಪಾಯದಲ್ಲಿರುವ ಬಡ ಹಾಗೂ ವಲಸೆ ಕಾರ್ಮಿಕರ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಶೈಕ್ಷಣಿಕ ವರ್ಷದಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹನುಮಂತ ಹರಿಜನ ಹಾಗೂ ಹರೀಶ್ ಹರಿಜನ ಅವರನ್ನು ಜಂಗಮಕೋಟೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ದಾಖಲಿಸಿ, ಸುಗಟೂರು ಸರ್ಕಾರಿ ಶಾಲೆಯ 4 ಮತ್ತು 5ನೇ ತರಗತಿಗಳಿಗೆ ದಾಖಲಾತಿ ಮಾಡಿಸಿದ್ದಾರೆ. ವಿದ್ಯಾರ್ಥಿನಿಲಯದಿಂದ ಶಾಲೆಗೆ ಮಕ್ಕಳನ್ನು ಕರೆತರುವುದು ಹಾಗೂ ವಾಪಸ್ ಕರೆದೊಯ್ಯುವುದು ಸೇರಿದಂತೆ ಅವರ ಕಲಿಕೆ, ಹಾಜರಾತಿ ಮತ್ತು ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಮಕ್ಕಳ ಕುಟುಂಬದವರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು ಶಿಕ್ಷಣ ಮುಂದುವರಿಸುವ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಶಾಲೆ ಬಿಟ್ಟ ಮಕ್ಕಳು, ಬಡತನದಿಂದ ಶಿಕ್ಷಣದಿಂದ ದೂರವಾಗುವ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಶಾಲೆಗೆ ದಾಖಲಿಸುವ ಕಾರ್ಯದಲ್ಲೂ ಅವರು ತೊಡಗಿದ್ದಾರೆ. ಅಗತ್ಯವಿದ್ದಲ್ಲಿ ವಸತಿ, ಶಾಲಾ ಬ್ಯಾಗ್, ನೋಟ್ ಪುಸ್ತಕ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ದಾನಿಗಳ ನೆರವಿನಿಂದ ಒದಗಿಸುತ್ತಿದ್ದಾರೆ. ಇದರಿಂದ ಶಾಲೆಯ ದಾಖಲಾತಿ ಹೆಚ್ಚಳಕ್ಕೂ ನೆರವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರುದ್ರೇಶಮೂರ್ತಿ, “ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಸಂಪರ್ಕಿಸುತ್ತಾರೆ. ಅಂತಹ ಮಕ್ಕಳಿಗೆ ವಸತಿ ಹಾಗೂ ಶಿಕ್ಷಣದ ವ್ಯವಸ್ಥೆ ಕಲ್ಪಿಸಿ, ಅವರು ವಿದ್ಯಾಭ್ಯಾಸ ಮುಂದುವರಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿನಿಲಯದ ಸಿಬ್ಬಂದಿಯ ಸಹಕಾರವೂ ಇದಕ್ಕೆ ನೆರವಾಗಿದೆ” ಎಂದು ಹೇಳಿದರು.
In English: Teacher H.S. Rudreshamurthy of Sugatur Government Higher Primary School in Sidlaghatta taluk has been bringing poor and migrant labourers’ children back into mainstream education. This year he enrolled two children from Savanur taluk, Haveri district into a pre-matric hostel and Sugatur school, arranging transport, learning materials and hostel support through donors.








