Sidlaghatta: ಶಿಡ್ಲಘಟ್ಟ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಅಬಿದ ಸೈಯದ್ ಸಾಹೇಬಜಾನ್ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಬಗ್ಗೆ ಟಾಸ್ಕ್ಫೋರ್ಸ್ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ತಹಶೀಲ್ದಾರ್ ಗಗನಸಿಂಧು ಮಾತನಾಡಿ, ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಗ್ರಾಮಗಳಿಗೆ ತಕ್ಷಣವೇ ನೀರೊದಗಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ತಾಲ್ಲೂಕಿನಲ್ಲಿ ಯಾವ ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಇದೆ, ಅಥವಾ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗಬಹುದು ಎಂಬುವುದರ ಪಟ್ಟಿ ನೀಡಬೇಕು. ಪ್ರತಿ ಗ್ರಾಮಕ್ಕೆ ಯಾವ ರೀತಿಯ ಕ್ರಮ (ಖಾಸಗಿ ಬೋರ್ವೆಲ್, ಟ್ಯಾಂಕರ್, ನೀರಿನ ಕೊಳವೆಬಾವಿ ಫ್ಲಶಿಂಗ್, ಶುದ್ಧೀಕರಣ ಘಟಕಗಳ ದುರಸ್ತಿ) ಅನುಕೂಲ ಎಂಬುದರ ಮಾಹಿತಿ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಆಡಳಿತಾಧಿಕಾರಿಗೆ ಹೊಣೆಯನ್ನು ನಿಗದಿಪಡಿಸಿ, ಸಮಸ್ಯೆ ಕಂಡುಬಂದ ಕೂಡಲೇ ಸ್ಥಳದಲ್ಲೇ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹೆಚ್ಚು ಸಮಸ್ಯಾತ್ಮಕ ಗ್ರಾಮಗಳನ್ನು ತಕ್ಷಣ ಗುರುತಿಸಿ ಅಲ್ಲಿ ಸಮಸ್ಯೆ ಬಗೆಹರಿಸಬೇಕಿದೆ” ಎಂದು ಹೇಳಿದರು.
“ನಮಗೆ ಈವರೆಗೆ ಬಂದಿರುವ ಮಾಹಿತಿಯ ಪ್ರಕಾರ ತಾಲ್ಲೂಕಿನ 27 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. 28 ಪಂಚಾಯಿತಿಗಳ ಪಿಡಿಒ ಗಳು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆಗಳಿರುವ ಗ್ರಾಮಗಳ ಪಟ್ಟಿಯನ್ನು ನೀಡಬೇಕು. ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಬೇಕು. ಒಂದು ಕಡೆ ನೀರಿನ ಸಮಸ್ಯೆಯುಂಟಾದರೆ ಉಳಿದೆಡೆಯೂ ಜನರು ಆತಂಕಪಡುವ ಸಾಧ್ಯತೆಯಿದೆ. ಗ್ರಾಮಾವಾರು ಜನಸಂಖ್ಯೆ, ಜಾನುವಾರುಗಳ ಜನಸಂಖ್ಯೆಗೆ ಅಗತ್ಯವಿರುವ ನೀರು ಹಾಗೂ ಲಭ್ಯವಿರುವ ನೀರಿನ ಕುರಿತು ಮಾಹಿತಿ ಅಗತ್ಯ. ಅಧಿಕಾರಿಗಳ ಹಂತದಲ್ಲಿ ಸಾಧ್ಯವಾದಷ್ಟೂ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಿದೆ” ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಹೇಮಾವತಿ ಮಾತನಾಡಿ, ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಗ್ರಾಮಗಳ ಪಟ್ಟಿ ಮತ್ತು ಸದ್ಯಕ್ಕೆ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ದಾಖಲಿಸಬೇಕು ಮತ್ತು ಮಾಹಿತಿ ನಿಖರವಾಗಿರಬೇಕು. ಸಮಸ್ಯೆ ನಿವಾರಣೆಗಾಗಿ ಗ್ರಾಮ ಪಂಚಾಯತ್ಗಳ ಮಟ್ಟದಲ್ಲಿ ಸ್ಥಳೀಯವಾಗಿಯೇ ಕೈಗೊಳ್ಳುವ ಕ್ರಮಗಳು, ನೀರಿನ ಮೂಲಗಳ ನಿರ್ವಹಣೆ ಮತ್ತು ನೈರ್ಮಲ್ಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿಹೇಳಿದರು.
ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು, ರಜಸ್ವ ನಿರೀಕ್ಷಕರು ಹಾಜರಿದ್ದರು.








