Tippenahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ತಿಪ್ಪೇನಹಳ್ಳಿಯಲ್ಲಿ ಇರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನಾ ಮಹೋತ್ಸವದ 48ನೇ ದಿನದಂದು ದೀಪೋತ್ಸವ ಹಾಗೂ ಊರ ಜಾತ್ರೆ ಅದ್ಧೂರಿಯಾಗಿ ನಡೆಯಿತು.
ಈ ವಿಶೇಷ ದಿನದಂದು ದೇವರಿಗೆ ಹೂವಿನ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಒದಗಿಸಲಾಯಿತು.
ಗ್ರಾಮದ ಬೀದಿಗಳು ಹಬ್ಬದ ಅಂಗವಾಗಿ ಸಿಂಗಾರಗೊಂಡಿದ್ದವು. ಮನೆ ಮನೆಗಳಲ್ಲಿ ಮಾವಿನ ಎಲೆ, ಬಾಳೆ ತಳಿರು ತೋರಣ ಕಟ್ಟಲಾಗಿದ್ದು, ರಂಗೋಲಿ, ದೀಪಗಳು ಜಾತ್ರೆಗೆ ಮತ್ತಷ್ಟು ಕಳೆ ತರಿದವು.
ದೀಪೋತ್ಸವದ ಭಾಗವಾಗಿ ತಲೆಯ ಮೇಲೆ ತಂಬಿಟ್ಟು ದೀಪವನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಬಳಿಕ ದೇವಾಲಯದ ಬಳಿ ದೀಪದ ಆರತಿ ಸಲ್ಲಿಸಿ, ಭಕ್ತರು ದೇವರಲ್ಲಿ ತಮ್ಮ ಇಷ್ಟಾರ್ಥಗಳ Siddhiಗಾಗಿ ಪ್ರಾರ್ಥಿಸಿದರು.
ಮೇಳ, ತಮಟೆ, ನಾದಸ್ವರ ವಾದ್ಯಗಳೊಂದಿಗೆ ದೀಪ ಮೆರವಣಿಗೆ ತಿಪ್ಪೇನಹಳ್ಳಿಯಿಂದ ತುಮ್ಮನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದವರೆಗೆ ವಿಜೃಂಭಣೆಯಿಂದ ಸಾಗಿತು.
ಇದೇ ದೇವಾಲಯದಲ್ಲಿ ಕಳೆದ ತಿಂಗಳು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಮಂಗಳಾನಂದಸ್ವಾಮಿಯವರ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿತ್ತು. ನಾಳೆ (ಮಂಗಳವಾರ) ಮಂಡಲಪೂಜೆ ನಡೆಯಲಿದ್ದು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ ನಾಗರಾಜ್, ನರ್ಸರಿ ಲಕ್ಷ್ಮೀನಾರಾಯಣ್, ಭರತ್ ಭೂಷಣ್, ಟಿ.ಆರ್.ಆನಂದ್, ಟಿ.ಪಿ. ವೆಂಕಟೇಶ್, ಟಿ.ವಿ. ದೇವರಾಜ್, ಟಿ.ವಿ. ನಾಗೇಶ್, ಹಿರಿಯರಾಗಿ ರಾಘವೇಂದ್ರ ಮತ್ತು ಅನೇಕ ಗ್ರಾಮಸ್ಥರು ಭಕ್ತಿಯಿಂದ ಭಾಗವಹಿಸಿದರು.