Y Hunasenahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ “ಕಾನೂನು ಅರಿವು, ನೆರವು ಹಾಗೂ ಪೌಷ್ಟಿಕ ಆಹಾರ ಜಾಗೃತಿ ಕಾರ್ಯಕ್ರಮ”ದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ಮಾತನಾಡಿದರು.
“ಮನೆಯ ಅಡುಗೆ, ಹಣ್ಣು, ಹಸಿ ತರಕಾರಿ ಸೇವನೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅಗತ್ಯ. ಬೀದಿ ಬದಿ ತಯಾರಾಗುವ ಜಂಕ್ ಫುಡ್ ಸೇವನೆಯನ್ನು ದೂರವಿರಿಸಿ, ಉತ್ತಮ ಪೌಷ್ಟಿಕ ಆಹಾರದಿಂದ ಆರೋಗ್ಯಕರ ಜೀವನ ಕಟ್ಟಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜೊತೆಗೆ, ಮೊಬೈಲ್ ಬಳಕೆಯನ್ನು ಮಿತವಾಗಿ, ಅಧ್ಯಯನ ಮತ್ತು ಜ್ಞಾನಾರ್ಜನೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿದ್ಯಾ ವಸ್ತ್ರದ್ ಅವರು, “ಪೌಷ್ಟಿಕ ಆಹಾರ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಶಕ್ತಿ ನೀಡುತ್ತದೆ. ಈಗ ಸರ್ಕಾರ ತಾಯಂದಿರಷ್ಟೇ ಅಲ್ಲ, ತಂದೆಯ ಪಾತ್ರಕ್ಕೂ ಒತ್ತು ನೀಡುತ್ತಿದ್ದು, ಪುರುಷರಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ” ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ತಯಾರಿಸಿದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ, ಭಾಗವಹಿಸಿದ್ದವರಿಗೆ ವಿತರಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಲೇಖನಿ ಸಾಮಗ್ರಿಗಳನ್ನು ಹಂಚಿದರು.
ಕಾರ್ಯಕ್ರಮದಲ್ಲಿ ಸಿಡಿಪಿಒ ವಿದ್ಯಾ ವಸ್ತ್ರದ್, ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಸ್ಥಳೀಯ ಮುಖಂಡರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.







