Sidlaghatta : ಅಖಿಲ ಭಾರತ ಯಾದವ ಮಹಾಸಭಾ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಯಾದವ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಯಾದವ ಕಳಸ ಯಾತ್ರೆ ಬುಧವಾರ ಶಿಡ್ಲಘಟ್ಟವನ್ನು ಪ್ರವೇಶಿಸಿತು.
ನಗರಕ್ಕೆ ಆಗಮಿಸಿದ ಕಳಸಕ್ಕೆ ಯಾದವ ಸಮಾಜ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅದ್ದೂರಿ ಸ್ವಾಗತವನ್ನು ಕೋರಿದರು. ನಗರದ ಮಯೂರ ವೃತ್ತದಲ್ಲಿ ಕಳಸಗಳನ್ನು ಹೊತ್ತ ಮಹಿಳೆಯರು ಪೂರ್ಣಕುಂಭ ಸ್ವಾಗತವನ್ನು ಕೋರಿದರು.
ನಗರದ ಅಶೋಕ ರಸ್ತೆ ಮತ್ತು ಟಿ ಬಿ ರಸ್ತೆ ಮೂಲಕ ಸಾಗಿದ ಕಳಸ ಯಾತ್ರೆಗೆ ಪುಷ್ಪಾರ್ಚನೆ ಮಾಡಿ ಜನರು ಬರಮಾಡಿಕೊಂಡರು. ನಗರಸಭೆ ಕಾರ್ಯಾಲಯದ ಮುಂದೆ ಪೌರಾಯುಕ್ತೆ ಅಮೃತ ಮತ್ತು ನಗರಸಭಾ ಸದಸ್ಯರು ಕಳಸಕ್ಕೆ ಪೂಜೆ ಸಲ್ಲಿಸಿ, ಹೂವನ್ನು ಸಮರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಶ್ರೀ ಕೃಷ್ಣ ದೇವಾಲಯದಲ್ಲಿ ವಿಶೇಷವಾದ ಪೂಜೆ ಸಲ್ಲಿಸಿ ಆನಂತರ ಚಿಕ್ಕಬಳ್ಳಾಪುರಕ್ಕೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, 1962ರಲ್ಲಿ ಭಾರತ ಮತ್ತು ಚೀನಾ ನಡುವಿನ ರಜಾಂಗ್ -ಲಾ- ಕದನದಲ್ಲಿ ವೀರ ಮರಣ ಹೊಂದಿದ 120ಕ್ಕೂ ಹೆಚ್ಚು ಯಾದವ ಸಮಾಜದ ಹುತಾತ್ಮರಿಗೆ ಗೌರವ ಸಮರ್ಪಣೆಗಾಗಿ ಹಾಗೂ ಭಾರತೀಯ ಸೈನ್ಯದಲ್ಲಿ ಪ್ರತ್ಯೇಕ ರೆಜಿಮೆಂಟ್ ಗಾಗಿ ಒತ್ತಾಯಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಜಾತಿಗಣತಿ ಮಾಡಬೇಕು. ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಬಿಲ್ ನಲ್ಲಿ ಹಿಂದುಳಿದ ವರ್ಗದ ಮಹಿಳೆಯರಿಗೂ ಮೀಸಲಾತಿ ಸಿಗಬೇಕು. ಮುಂದಿನ ದಿನಗಳಲ್ಲಿ ಜಾತಿಗಣತಿ ಆದ ಮೇಲೆ ಸಂಸತ್ ನಲ್ಲಿ, ವಿಧಾನಸಭೆಯಲ್ಲಿ ಮತ್ತು ವಿಧಾನ ಪರಿಷತ್ ನಲ್ಲಿ ಹಿಂದುಳಿದ ವರ್ಗದವರಿಗೆ ಪ್ರತ್ಯೇಕ ಮೀಸಲಾತಿ ಕೊಡಬೇಕು ಎಂಬುದು ನಮ್ಮ ಸಂಘದ ನಾಲ್ಕು ನಿರ್ಣಯಗಳಾಗಿವೆ” ಎಂದು ಹೇಳಿದರು.
ಯಾದವ ಸಮಾಜದ ಮುಖಂಡರಾದ ಟಿ.ಕೆ. ನಟರಾಜ್, ದೊಗರನಾಯಕನಹಳ್ಳಿ ವೆಂಕಟೇಶ್, ಕೇಶವ ಮೂರ್ತಿ, ಚಂದ್ರಶೇಖರ್, ದೇವರಾಜ್, ನಗರಸಭೆಯ ಅಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪ ನವೀನ್, ನಗರಸಭಾ ಸದಸ್ಯರಾದ ನಾರಾಯಣಸ್ವಾಮಿ, ಲಕ್ಷ್ಮಣ, ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ವಕೀಲ ಯೋಗಾನಂದ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಆನಂದಗೌಡ ಹಾಜರಿದ್ದರು.
For Daily Updates WhatsApp ‘HI’ to 7406303366









