Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ (ಎಸ್.ಐ.ಆರ್) ಅಂಗವಾಗಿ ಬಿ.ಎಲ್.ಒಗಳು ಮನೆಮನೆಗೆ ತೆರಳಿ ಗಣತಿ ಅರ್ಜಿಗಳನ್ನು ಹಂಚಿಕೆ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದು, ಈಗ ಮತದಾರರಿಂದ ಭರ್ತಿಯಾದ ಅರ್ಜಿಗಳನ್ನು ಸ್ವೀಕರಿಸಿ ಡಿಜಿಟಲೀಕರಣಗೊಳಿಸುವ ಕಾರ್ಯವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಭಾಸ್ಕರ್ ತಿಳಿಸಿದರು.
ನಗರದ ಊಲ್ಲೂರು ಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಎಸ್.ಐ.ಆರ್ ಡಿಜಿಟಲೀಕರಣ ಕಾರ್ಯವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಕಡಿಮೆ ಡಿಜಿಟಲೀಕರಣ ಕೇಂದ್ರಗಳಿಗೆ ಭೇಟಿ :
ಕ್ಷೇತ್ರದಲ್ಲಿ ಗಣತಿ ಅರ್ಜಿ ಹಂಚಿಕೆ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಜಿಲ್ಲಾ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಅರ್ಜಿಗಳ ಡಿಜಿಟಲೀಕರಣ ಕಾರ್ಯ ಶೇ 10ರಿಂದ 15ರಷ್ಟು ಮಾತ್ರ ಆಗಿರುವ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲು ಶಿಡ್ಲಘಟ್ಟ ನಗರಕ್ಕೆ ಆಗಮಿಸಿದ್ದಾಗಿ ಅಪರ ಜಿಲ್ಲಾಧಿಕಾರಿ ಹೇಳಿದರು.
ನಗರದ ಮತಗಟ್ಟೆಗಳಲ್ಲಿ ಡಿಜಿಟಲೀಕರಣ ಕಾರ್ಯ ಶೇ 10ರಿಂದ 15ರಷ್ಟು ಮಾತ್ರ ಪೂರ್ಣಗೊಂಡಿದ್ದು, ಇದನ್ನು ನಾಳೆಯೊಳಗೆ ಶೇ 50ಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಕಾರ್ಯದಲ್ಲಿ ಜಿಲ್ಲಾ ನೋಂದಣಾಧಿಕಾರಿ, ತಹಶೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರು ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಭಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೋಂದಣಾಧಿಕಾರಿ ಎಸ್.ಎಸ್.ಅಬೀದ್, ತಹಶೀಲ್ದಾರ್ ಗಗನ ಸಿಂಧು, ನಗರಸಭೆ ಪೌರಾಯುಕ್ತೆ ಅಮೃತ ಹಾಜರಿದ್ದರು.

In English: Additional Deputy Commissioner Bhaskar directed officials in Sidlaghatta to speed up digitization of filled voter enumeration forms collected during the SIR (Special Intensive Revision) exercise. He visited an Anganwadi center where digitization was only 10-15% complete and ordered it raised above 50% by the next day.
SIR ಗಣತಿ ಕಾರ್ಯದ ಇತ್ತೀಚಿನ ಪ್ರಗತಿ ಕುರಿತು ಇಲ್ಲಿ ಓದಿ.








