ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತದ ವತಿಯಿಂದ ಸರಳವಾಗಿ ಆಚರಿಸಿದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಾಜೀವ್ ಮಾತನಾಡಿದರು.
ಭಗವಾನ್ ಮಹಾವೀರರ ಆಧ್ಯಾತ್ಮಿಕ ಉಪದೇಶಗಳ ಬೆಳಕು ಸದಾ ನಮಗೆ ದಾರಿ ದೀಪವಾಗಿರಲಿ. ಮಹಾವೀರರು ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹವೆಂಬ ಪಂಚಶೀಲ ತತ್ತ್ವವನ್ನು ಬೋಧಿಸಿದರು. ಭಗವಾನ್ ಮಹಾವೀರರು ತಮ್ಮ ಬೋಧನೆಗಳ ಮೂಲಕ ಜನರಲ್ಲಿ ವೈಚಾರಿಕ ಬದಲಾವಣೆ ಉಂಟು ಮಾಡಿದರು. ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅಹಿಂಸೆಯಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶದ ಮೂಲಕ ಸಕಲ ಜೀವಿಗಳಿಗೂ ಶಾಂತಿ ಬಯಸಿದ ಜೈನ ಧರ್ಮದ ತೀರ್ಥಂಕರ ಭಗವಾನ್ ಮಹಾವೀರರ ತತ್ವ, ಸಿದ್ಧಾಂತ ಹೆಚ್ಚು ಪ್ರಸ್ತುತವಾಗಿದೆ ಎಂದು ಅವರು ತಿಳಿಸಿದರು.
ಸರ್ವಜನ ಹಿತಾಯ, ಸರ್ವಜನ ಸುಖಾಯ ಎಂಬ ಧ್ಯೇಯವಾಕ್ಯದಲ್ಲಿ ಮುನ್ನಡೆದ ಜೈನಧರ್ಮ ಜೀವ ಪ್ರೇಮದ ಮಹತ್ವವನ್ನು ಸಾರುತ್ತ ಜನ ಸಮುದಾಯದ ಒಳಿತನ್ನು ಸಾರಿ ಭಾರತದ ಪುರಾತನ ಧರ್ಮವಾಗಿದೆ. ನಿಜವಾದ ಬದುಕೆಂದರೆ ಕೊಡುವ ಮೂಲಕ ಸಂತೃಪ್ತಿಯನ್ನು ಪಡೆಯುವುದೇ ಆಗಿದೆ. ಮಹಾವೀರರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ. ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಪ್ರತಿಯೊಬ್ಬರೂ ಅವರ ಬದುಕು ಪ್ರೇರಣೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು.