Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿದ್ದ ಶಾಸನಗಳ ಅಧ್ಯಯನದ ವೇಳೆ ಶಾಸನಗಳು ಹಾಗೂ ವೀರಗಲ್ಲುಗಳ ದುಃಸ್ಥಿತಿಯನ್ನು ಗಮನಿಸಿದ ತಜ್ಞರ ತಂಡವು, ಇತಿಹಾಸದ ಈ ಅಮೂಲ್ಯ ಕುರುಹುಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ರಕ್ಷಣೆಗೆ ಮುಂದಾಗುವಂತೆ ತಹಸೀಲ್ದಾರ್ ಎನ್.ಗಗನಸಿಂಧೂ ರವರಿಗೆ ಬುಧವಾರ ಮನವಿ ಸಲ್ಲಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ತಹಸೀಲ್ದಾರ್ರನ್ನು ಭೇಟಿಯಾದ ತಜ್ಞರ ತಂಡ ತಾಲ್ಲೂಕಿನ ಐತಿಹಾಸಿಕ ಶಾಸನಗಳು ಹಾಗೂ ವೀರಗಲ್ಲುಗಳ ಸಂರಕ್ಷಣೆಗೆ ತಾಲ್ಲೂಕು ಆಡಳಿತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಎನ್.ಗಗನಸಿಂಧೂ ಮಾತನಾಡಿ ಶಾಸನಗಳು ನಮ್ಮ ಸಂಸ್ಕೃತಿಯ ಜೀವಂತ ದಾಖಲೆಗಳಾಗಿದ್ದು ಇವುಗಳ ರಕ್ಷಣೆ ಅತ್ಯಂತ ಅವಶ್ಯಕ. ಇವುಗಳ ರಕ್ಷಣೆಗೆ ತಾಲ್ಲೂಕು ಆಡಳಿತದಿಂದ ಅಗತ್ಯವಿರುವ ಎಲ್ಲಾ ಸಹಕಾರ ನೀಡಲಾಗುವುದು ಎಂದರು.
ತಾಲ್ಲೂಕಿನಾಧ್ಯಂತ ಈಗಾಗಲೇ ಬಹಳಷ್ಟು ಶಾಸನಗಳು ಸೇರಿದಂತೆ ವೀರಗಲ್ಲುಗಳನ್ನು ಗುರುತಿಸಿರುವ ತಜ್ಞರ ತಂಡ ತಾಲ್ಲೂಕಿನಾಧ್ಯಂತ ಇರುವ ಎಲ್ಲಾ ಸಾಲೆಗಳಿಗೂ ಭೇಟಿ ನೀಡಿ ಮಕ್ಕಳಿಗೆ ಉಪನ್ಯಾಸ ಹಾಗು ಜಾಗೃತಿ ಮೂಡಿಸುವ ಕೆಲಸ ಮಾಡುವುದರೊಂದಿಗೆ ಮುಂದಿನ ಫೀಳಿಗೆಗೆ ನಮ್ಮ ಪರಂಪರೆಯ ಮಹತ್ವ ತಿಳಿಸಿಕೊಡಬೇಕು ಎಂದು ಹೇಳಿದರು.
ಶಾಸನ ತಜ್ಞರಾದ ಕೆ.ಧನಪಾಲ್, ಅಪ್ಪೇಗೌಡನಹಳ್ಳಿ ತ್ಯಾಗರಾಜು, ಗ್ರಾ.ಪಂ.ಪಿಡಿಒ ಮಧು, ಕಾರ್ಯದರ್ಶಿ ಶ್ರೀನಿವಾಸ, ಗ್ರಾಮ ಲೆಕ್ಕಾಧಿಕಾರಿ ನಯನ, ಸಂಶೋಧನಾ ವಿದ್ಯಾರ್ಥಿನಿಯರಾದ ಜ್ಞಾನೇಶ್ವರಿ ಹಾಗೂ ಅಶ್ವಿನಿ ಮತ್ತಿತರರು ಹಾಜರಿದ್ದರು.








