Sidlaghatta : ಬೆಂಗಳೂರು ಯಲಹಂಕದ ಕೋಗಿಲು ಕ್ರಾಸ್ ಬಳಿ ಮಂಗಳವಾರ ರಾತ್ರಿ ಮೆಟ್ರೋ ಕಾಮಗಾರಿಯ ಸಮಯದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಭಾರಿ ತಡೆಗೋಡೆ (ವಯಾಡಕ್ಟ್) ರಸ್ತೆಗೆ ಉರುಳಿ ಬಿದ್ದಿದ್ದು, ಅದರ ಕೆಳಗೆ ಇದ್ದ ಆಟೋಗೆ ಡಿಕ್ಕಿಯಾಗಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಶಿಡ್ಲಘಟ್ಟ ತಾಲ್ಲೂಕಿನ ರಹಮತ್ ನಗರದ ನಿವಾಸಿ ಖಾಸಿಂ ಸಾಬ್ (ವಯಸ್ಸು 40) ಎಂದು ಗುರುತಿಸಲಾಗಿದೆ. ಖಾಸಿಂ ಸಾಬ್ ಕಳೆದ 20 ವರ್ಷಗಳಿಂದ ಆಟೋ ಓಡಿಸುತ್ತಿದ್ದರು. ಇತ್ತೀಚೆಗೆ ಫೈನಾನ್ಸ್ನಲ್ಲಿ ಹೊಸ ಆಟೋ ಖರೀದಿಸಿ ಕೇವಲ 20 ದಿನವಾದಾಗಲೇ ಈ ದುರ್ಘಟನೆ ಸಂಭವಿಸಿದೆ.
ಆಪತ್ತು ಸಂಭವಿಸಿದಾಗ ಖಾಸಿಂ ಪ್ರಯಾಣಿಕರನ್ನು ಬೆಂಗಳೂರಿಗೆ ಬಿಟ್ಟು ಶಿಡ್ಲಘಟ್ಟಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಕೋಗಿಲು ಕ್ರಾಸ್ ಬಳಿ ಲಾರಿ ತಿರುಗುತ್ತಿರುವಾಗ ಅದರಲ್ಲಿ ಸಾಗಿಸುತ್ತಿದ್ದ ಬೃಹತ್ ತಡೆಗೋಡೆ ರಸ್ತೆಗೆ ಉರುಳಿದೆ. ಅದೇ ಸಮಯದಲ್ಲಿ ಆಟೋ ಲಾರಿಗೆ ಹತ್ತಿರವಾಗಿ ಹೋಗಿದ್ದು, ತಡೆಗೋಡೆ ನೇರವಾಗಿ ಆಟೋ ಮೇಲೆ ಬಿದ್ದಿದೆ.
ಅಪಘಾತದ ತೀವ್ರತೆಗೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಬಳಿಕ ಸ್ಥಳೀಯರು ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಖಾಸಿಂ ಸಾಬ್ ತಮ್ಮ ಕುಟುಂಬದ ಏಕೈಕ ಆಧಾರವಾಗಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣುಮಗಳು ಇದ್ದಾರೆ. ಈ ದುರ್ಘಟನೆಯಿಂದ ಕುಟುಂಬದ ಮೇಲೆ ದುಃಖದ ನೆರಳು ಆವರಿಸಿದೆ.
ಆಟೋದಲ್ಲಿ ಪ್ರಯಾಣಿಸುತ್ತಿದ್ದವರು ಅಪಘಾತದ ಮುನ್ನೆಚ್ಚರಿಕೆಯಿಂದ ಆಟೋದಿಂದ ಇಳಿದು ಓಡಿ ಜೀವ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.