ಬಿಸಿಯೂಟದ ಯೋಜನೆಯಡಿಯಲ್ಲಿ ಕಡಿಮೆ ಕೂಲಿಗೆ ಬಡ ಹೆಣ್ಣು ಮಕ್ಕಳು ದುಡಿಯುತ್ತಿದ್ದಾರೆ. ಈಗ ಈ ಯೋಜನೆಯನ್ನು ಸರ್ಕಾರ ಖಾಸಗೀಕರಣ ಹಾಗೂ ಕೇಂದ್ರೀಕೃತ ಮಾಡಲು ಹೊರಟು ಹೆಣ್ಣು ಮಕ್ಕಳನ್ನು ಬೀದಿ ಪಾಲು ಮಾಡುತ್ತಿದೆ ಎಂದು ಬಿಸಿಯೂಟ ನೌಕರರ ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ಆರೋಪಿಸಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ಬಿಸಿಯೂಟ ನೌಕರರ ಮೂರನೇ ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದಲ್ಲಿ ಬಿಸಿಯೂಟ ಯೋಜನೆಯಲ್ಲಿ ಒಂದು ಲಕ್ಷ 19 ಸಾವಿರ ಮಹಿಳೆಯರು ದುಡಿಯುತ್ತಿದ್ದಾರೆ. ಅವರ ದೈಹಿಕ ಶ್ರಮಕ್ಕೆ ತಕ್ಕಂತೆ ವೇತನವನ್ನು ಹೆಚ್ಚಿಸುವ ಬದಲಿಗೆ ವಿದ್ಯಾರ್ಥಿಗಳ ಹಾಜರಾತಿಯ ನೆಪದಲ್ಲಿ ಹುದ್ದೆಗಳನ್ನು ಕಡಿತಗೊಳಿಸಲಾಗುತ್ತಿದೆ. ಹೆಚ್ಚುವರಿ ಕೆಲಸ, ಸೇವಾ ಭದ್ರತೆಯಿಲ್ಲದೆ, ಕಡಿಮೆ ಹಣಕ್ಕಾಗಿ ಬಡ ಹೆಣ್ಣು ಮಕ್ಕಳನ್ನು ದುಡಿಸುತ್ತಿರುವುದು ಶೋಷಣೆಯ ಪರಮಾವಧಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಬಿಸಿಯೂಟ ನೌಕರರ ಖಾಯಮ್ಮಾತಿಗೆ ಒತ್ತಾಯಿಸಲಾಯಿತು. ಬಿಸಿಯೂಟ ನೌಕರರು ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ನೀತಿಗಳನ್ನು ವಿರೋಧಿಸಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಬಿಸಿಯೂಟ ನೌಕರರ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಗುಲ್ಜಾರ್, ಖಜಾಂಚಿ ಪಾಪಣ್ಣ, ಗೀತಾ, ನಾಗರತ್ನ, ಶ್ರೀದೇವಿ, ಡಿವೈಎಫ್ಐ ತಾಲ್ಲೂಕು ಅಧ್ಯಕ್ಷ ಫಯಾಜ್, ಶಂಕರಪ್ಪ ಮತ್ತಿತರರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -