ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಭಾರತೀಯರೆಲ್ಲರೂ ಸಂಕಲ್ಪ ಮಾಡಬೇಕಿದೆ – ಚಕ್ರವರ್ತಿ ಸೂಲಿಬೆಲೆ

- Advertisement -
- Advertisement -

ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಟೀಂ ಮೋದಿ ಕಾರ್ಯಕರ್ತರು ಆಯೋಜಿಸಿದ್ದ “ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು”ಕಾರ್ಯಕ್ರಮದಲ್ಲಿ ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.
“ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷ ನನಗೆ ಮುಖ್ಯವಲ್ಲ. ನನ್ನ ದೇಶ ನನಗೆ ಬಹುಮುಖ್ಯ. ದೇಶವನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಸಮರ್ಥ ನಾಯಕರೆಂದರೆ ನರೇಂದ್ರ ಮೋದಿ. ರಾಹುಲ್ ಗಾಂಧಿ ಯಾವುದೇ ರೀತಿಯಲ್ಲೂ ಪ್ರಧಾನಿ ಸ್ಥಾನಕ್ಕೆ ಯೋಗ್ಯ ವ್ಯಕ್ತಿ ಅಲ್ಲವೇ ಅಲ್ಲ. ಹಾಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಭಾರತೀಯರೆಲ್ಲರೂ ಸಂಕಲ್ಪ ಮಾಡಬೇಕಿದೆ” ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಭಾರತ ಪ್ರಭಾವಿಶಾಲಿ ಎಂದು ಗುರುತಿಸಿಕೊಂಡಿದೆ. ಪ್ರತಿಯೊಂದು ರಾಷ್ಟ್ರವೂ ನಮ್ಮ ದೇಶವನ್ನು ದೇಶವಾಸಿಗಳನ್ನು ಗೌರವದಿಂದ ಕಾಣುವಂತಾಗಿದೆ. ಕಾಂಗ್ರೆಸ್ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ತಮಗೆ ತಾವೇ ಭಾರತರತ್ನ ಪ್ರಶಸ್ತಿ ಕೊಟ್ಟುಕೊಂಡರು. ಆದರೆ ಜಗತ್ತೇ ಮೆಚ್ಚಿ ಕೊಂಡಾಡಿ ನರೇಂದ್ರ ಮೋದಿಯವರಿಗೆ ದಕ್ಷಿಣ ಕೊರಿಯಾದ ಶಾಂತಿ ಪ್ರಶಸ್ತಿ, ವಿಶ್ವ ಸಂಸ್ಥೆಯ ಅತ್ಯುನ್ನತ ಪರಿಸರ ಗೌರವ, ಸಂಯುಕ್ತ ಅರಬ್ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ, ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿವೆ. ಭಾರತವನ್ನು ಇಡೀ ಜಗತ್ತು ಗೌರವದಿಂದ ಕಾಣುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿಯವರದ್ದು ಎಂದರು.
ಯಾವುದೇ ಲೋಕಸಭಾ ಕ್ಷೇತ್ರದಲ್ಲಿ ಒಬ್ಬರೇ ವ್ಯಕ್ತಿ ಐದು ಬಾರಿ ಗೆದ್ದರೆಂದರೆ ಅವರು ಅಲ್ಲಿ ಜನರಿಗೆ ಪ್ರಧಾನಮಂತ್ರಿಯಿದ್ದಂತೆ. ಏಕೆಂದರೆ, ಆ ವ್ಯಕ್ತಿ ಪಾರ್ಲಿಮೆಂಟ್ ನಲ್ಲಿ ಹಿರಿಯ ಸದಸ್ಯರಾಗಿರುವುದರಿಂದ ಅವರ ಕೆಲಸಗಳೆಲ್ಲವೂ ಅಡೆತಡೆಗಳಿಲ್ಲದಂತೆ ನೆರವೇರುತ್ತವೆ. ಏಳು ಬಾರಿ ಕಾಂಗ್ರೆಸ್ ನ ಕೆ.ಎಚ್.ಮುನಿಯಪ್ಪ ಅವರನ್ನು ಗೆಲ್ಲಿಸಿದ್ದೀರಿ. ಆದರೆ, ಕೋಲಾರ ಅತ್ಯಂತ ಹಿಂದುಳಿದ ಕ್ಷೇತ್ರವೆಂದು ಹೆಸರಾಗಿದೆ. ನಿಮಗೆ ಬದಲಾವಣೆ ಬೇಡವೇ? ಈಗಲಾದರೂ ಇಂಥಹವರಿಗೆ ತಕ್ಕ ಪಾಠ ಕಲಿಸಿ. ಮೋದಿಯವರು ಪ್ರಧಾನಿಯಾಗುವಲ್ಲಿ ಸೇರುವ ಕಮಲಗಳಲ್ಲಿ ಕೋಲಾರದ ಕಮಲವೂ ಒಂದಿರುವಂತೆ ನೋಡಿಕೊಳ್ಳಿ ಎಂದು ನುಡಿದರು.
ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸಿದ ಮೋದಿಯವರು ಅದೇ ಹಣವನ್ನು ಮುಸ್ಲೀಂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿದ್ದು ವ್ಯಾಪಕವಾಗಿ ಸ್ವಾಗತಿಸಲಾಗಿದೆ. ಇತರರ ಹಣದಲ್ಲಿ ಪವಿತ್ರ ಹಜ್ ಯಾತ್ರೆ ಮಾಡಬಾರದೆಂದು ಕುರಾನಿನಲ್ಲಿಯೇ ಇದೆ. ಅದೇ ಹಣವನ್ನು ಮುಸ್ಲೀಂ ಹೆಣ್ಣುಮಕ್ಕಳ ಆತ್ಮಾಭಿಮಾನಕ್ಕೆ ನೀಡಿರುವುದನ್ನು ಮುಸ್ಲೀಂ ಮುಖಂಡರೇ ಶ್ಲಾಘಿಸಿದ್ದಾರೆ.
ಈ ದೇಶದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು, ಜಾಗತಿಕ ಮಟ್ಟದಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸಲು ಮೋದಿಯಂಥಹ ದೇಶ ಭಕ್ತರು ಅಗತ್ಯ. ಮೋದಿಜಿಯವರ ಆಡಳಿತ ವ್ಯವಸ್ಥೆಯಲ್ಲಿ ಭಾರತ ಸಾಧಿಸಿರುವ ಮಹತ್ವದ ಮೈಲಿಗಲ್ಲು ಜನರ ಮುಂದಿದೆ. ಪ್ರಧಾನಿಯಾಗುತ್ತಿದ್ದಂತೆ ಮೋದಿಜಿಯವರು ಸೈನಿಕರ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಸೈನಿಕರಿಗೂ ಕೂಡಾ ಇಂಥಹ ಪ್ರಧಾನಿಯೊಬ್ಬರ ಅವಶ್ಯಕತೆ ಇತ್ತು. ಅದನ್ನು ಭಾರತೀಯ ಸೈನಿಕರೇ ಹೇಳಿ ಕೊಂಡಾಡಿದ್ದಾರೆ. ಪ್ರತಿಯೊಂದು ದೇಶದಲ್ಲಿಯೂ ಇರುವ ಯುದ್ಧ ಸ್ಮಾರಕಗಳ ಬಗ್ಗೆ ಕನಸು ಕಂಡ ಮೋದಿಯವರು ವಾರ್ ಮೆಮೋರಿಯಲ್ ನಿರ್ಮಾಣ ಮಾಡಿ ಇಂದು ದೇಶಕ್ಕೆ ಸಮರ್ಪಿಸಿದ್ದಾರೆ. ಕಳೆದ ೭೦ ವರ್ಷದಲ್ಲಿ ಆಗದಿರುವ ಕಾರ್ಯ ಇವತ್ತು ಮೋದಿಯವರಿಂದ ಆಗಿದೆ ಎನ್ನುವುದು ನಾವು ಗಮನಿಸಬೇಕಾಗಿದೆ. ಸ್ವಚ್ಛ ಭಾರತ, ಬಯಲು ಶೌಚಾಲಯ ಮುಕ್ತ ಭಾರತ, ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್, ಗ್ಯಾಸ್, ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಬೇಟಿ ಬಚಾವೋ ಬೇಟಿ ಪಡಾವೋ, ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ, ಸಬ್ಸಿಡಿ ಹಣ ನೇರವಾಗಿ ಫಲಾನುಭವಿಯ ಖಾತೆಗೆ ವರ್ಗಾವಣೆ, ವಿಮೆ, ಮೇಕ್ ಇನ್ ಇಂಡಿಯಾ, ಅಟಲ್ ಪಿಂಚಣಿ ಯೋಜನೆ ಮುಂತಾದ ಜನಪರ ಯೋಜನೆಗಳನ್ನು ನೀಡಿದ್ದಾರೆ ಎಂದರು.
ಸಿಂಗಾಪೂರಿನಲ್ಲಿ ಪ್ರಸಾಧನ ಶಾಸ್ತ್ರಜ್ಞೆಯಾಗಿರುವ ಭಾವನಾ ಶಿವಾನಂದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿ ನೆಲೆಸಿರುವ, ದುಡಿಯುತ್ತಿರುವ ಭಾರತೀಯರ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ. ದೇಶ ಬಿಟ್ಟು ದೂರದೂರದ ದೇಶಗಳಲ್ಲಿ ದುಡಿಯುವವರಿಗೆ ಆ ದೇಶದವರು ಗೌರವದಿಂದ ಕಾಣುವಂತೆ ಮೋದಿಯವರು ಮಾಡಿದ್ದಾರೆ. ಇದನ್ನೆಲ್ಲಾ ತಿಳಿಸಲು ಎರಡು ತಿಂಗಳ ಕಾಲ ಕೆಲಸಕ್ಕೆ ರಜೆ ಹಾಕಿ ಟೀಂ ಮೋದಿಯೊಂದಿಗೆ ಹಳ್ಳಿ ಹಳ್ಳಿ ಸುತ್ತುತ್ತಿದ್ದೇನೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಟೀಂ ಮೋದಿ ಕಾರ್ಯಕರ್ತರು ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!